Sunday, June 14, 2026
spot_imgspot_img
spot_imgspot_img

ಪೂಜೆಗೆ ತೆರಳಿದ್ದ ವೈದ್ಯ ನೀರಿನಲ್ಲಿ ಮುಳುಗಿ ಸಾವು..!

- Advertisement -
- Advertisement -

ಪೂಜೆಗೆ ತೆರಳಿದ್ದ ವೈದ್ಯರೊಬ್ಬರು ಹೇಮಾವತಿ ನದಿಯ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಖೋನಾಪುರದಲ್ಲಿ ನಡೆದಿದೆ.

ಮೃತರನ್ನು ಡಾ.ಚಂದ್ರಶೇಖರ್ (31) ಎಂದು ಗುರುತಿಸಲಾಗಿದೆ. ಅವರು ಹೊಳೆನರಸಿಪುರದ ಕೆರಗೋಡಿನಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಕರ್ತವ್ಯಕ್ಕೆ ತೆರಳುವ ಮುನ್ನ ಖೋನಾಪುರದ ಐಲ್ಯಾಂಡ್‍ನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು. ಈ ವೇಳೆ ನದಿಗೆ ಸ್ನಾನಕ್ಕೆ ತೆರಳಿದ್ದಾಗ ಈ ಅವಘಡ ನಡೆದಿದೆ. ಹಲವು ವರ್ಷಗಳಿಂದಲೂ ಚಂದ್ರಶೇಖರ್ ಹೇಮಾವತಿ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಿದ್ದರು. ಅದರಂತೆ ಚಂದ್ರಶೇಖರ್ ಶುಕ್ರವಾರ ಸಹ ಪೂಜೆಗೂ ಮುನ್ನ ನದಿಗೆ ಇಳಿದಿದ್ದರು. ಹೇಮಾವತಿ ನದಿ ನೀರು ಸಂಪೂರ್ಣ ಕಡಿಮೆಯಾಗಿದ್ದು, ಆಳ ಅರಿಯದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ರಾತ್ರಿ ಆದರೂ ಮನೆಗೆ ವಾಪಸ್ ಆಗದ ಹಿನ್ನೆಲೆ ಪೋಷಕರು ಚಂದ್ರಶೇಖರ್‌ಗೆ ಕರೆ ಮಾಡಿದ್ದಾರೆ. ಫೋನ್ ರಿಸೀವ್ ಮಾಡದೇ ಇದ್ದಾಗ ಗಾಬರಿಗೊಂಡ ಪೋಷಕರು ಅರಕಲಗೂಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಗೊರೂರು ಪೊಲೀಸರಿಗೆ ಮಾಹಿತಿ ನೀಡಿದ್ದು ಗಸ್ತಿನಲ್ಲಿದ್ದ ಗೊರೂರು ಪೊಲೀಸರು ಒಂದೇ ಸ್ಥಳದಲ್ಲಿ ಕಾರು ನಿಂತಿದ್ದನ್ನು ಗಮನಿಸಿದ್ದರು. ಈ ವೇಳೆ ಹುಡುಕಾಟ ನಡೆಸಿದಾಗ ನದಿಯ ದಡದಲ್ಲಿ ಚಂದ್ರಶೇಖರ್ ಬಟ್ಟೆ ಪತ್ತೆಯಾಗಿತ್ತು. ಬಳಿಕ ನದಿಯಲ್ಲಿ ಚಂದ್ರಶೇಖರ್ ಶವ ತೇಲುತ್ತಿರುವುದು ಪತ್ತೆಯಾಗಿತ್ತು.

ನಂತರ ಪೊಲೀಸರು ಶವವನ್ನು ಹೊರಗೆ ತೆಗೆದಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!