ಚಿಕ್ಕಮಗಳೂರು: ಹಾವು ಕಡಿದು ಉರಗತಜ್ಞ ಸಾವನ್ನಪ್ಪಿರುವ ದಾರುಣ ಘಟನೆ ಕಾಫಿನಾಡು ಚಿಕ್ಕಮಗಳೂರಿನ ಹೊಸಮನೆ ಬಡಾವಣೆಯಲ್ಲಿ ನಡೆದಿದೆ.
ನರೇಶ್ ಮೃತ ಉರಗತಜ್ಞರಾಗಿದ್ದು ಹಾವಿನ ರಕ್ಷಣೆಗೆ ತೆರಳಿದ್ದ ವೇಳೆ ಹಾವು ಕಡಿದು ಮೃತಪಟ್ಟಿದ್ದಾರೆ. ಕಾಳಿಂಗ ಸೇರಿದಂತೆ ಸಾವಿರಾರು ಹಾವುಗಳನ್ನ ಸೆರೆಹಿಡಿದಿದ್ದು ಸಾರ್ವಜನಿಕರ ಆಪತ್ಭಾಂಧವರಾಗಿದ್ದರು ನರೇಶ್. ನಾಗರಹಾವನ್ನು ರಕ್ಷಣೆ ಮಾಡಿ ಚೀಲದಲ್ಲಿ ಹಾಕಿ ಸ್ಕೂಟಿಯ ಸೀಟ್ ಕೆಳಗೆ ಇಟ್ಟಿದ್ದ ನರೇಶ್ ಅವರು, ಮತ್ತೊಂದು ಹಾವನ್ನು ಹಿಡಿದು ರಕ್ಷಣೆ ಮಾಡಲು ಹೊರಟಿದ್ದರು.
ಸ್ಕೂಟಿಯ ಸೀಟ್ ತೆಗೆದು ಹಾವಿದ್ದ ಚೀಲ ಸರಿಪಡಿಸಲು ಮುಂದಾದಾಗ ನಾಗರಹಾವು ಕಚ್ಚಿದೆ. ತಕ್ಷಣವೇ ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ನರೇಶ್ ಸಾವನ್ನಪ್ಪಿದ್ದಾರೆ. ಉರಗತಜ್ಞ ನರೇಶ್ ಅವರ ಬೈಕ್ ಡಿಕ್ಕಿಯಲ್ಲಿ 2 ಹಾವು, ಕಾರಿನಲ್ಲಿ 30ಕ್ಕೂ ಹೆಚ್ಚು ಹಾವುಗಳು ಇದ್ದವು. ಕಾರಿನ ಸೀಟ್, ಡಿಕ್ಕಿಯಲ್ಲಿ 20ಕ್ಕೂ ಹೆಚ್ಚು ಚೀಲದ ತುಂಬೆಲ್ಲಾ ಸೆರೆಹಿಡಿದಿದ್ದ ವಿವಿಧ ಜಾತಿಯ ಹಾವುಗಳ ಇದ್ದವು. ಉರಗತಜ್ಞ ನರೇಶ್ ಅವರು ಹಾವುಗಳನ್ನು ಹಿಡಿದು ಕಾರಿನಲ್ಲಿ ಶೇಖರಿಸಿಕೊಳ್ಳುತ್ತಿದ್ದರು. 15 ದಿನಕ್ಕೊಮ್ಮೆ ಚಾರ್ಮಾಡಿಗೆ ಹೋಗಿ ಬಿಟ್ಟು ಬರುತ್ತಿದ್ದರು ಎನ್ನಲಾಗಿದೆ.