ಚಿಪ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಆಯತಪ್ಪಿ ಚಿಪ್ಸ್ ಕರೆಯುವ ಬಾಣಲೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಕ್ರೆ ಗ್ರಾಮದಲ್ಲಿ ನಡೆದಿದೆ.
ಸಂದೇಶ್ (25) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಮೃತ ಸಂದೇಶ್ ಕಿಕ್ರೆ ಗ್ರಾಮದಲ್ಲಿ ಚಿಪ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಫ್ಯಾ ಕ್ಟರಿಯಲ್ಲಿ 20 ಕ್ಕೂ ಹೆಚ್ಚು ಯುವಕರು ಕೆಲಸ ಮಾಡುತ್ತಿದ್ದಾರೆ. ಕಳೆದ 13 ದಿನಗಳ ಹಿಂದೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ವೇಳೆ ಚಿಪ್ಸ್ ಕರೆಯುವ ಒಲೆಗೆ ತಾಪಮಾನ ಹೆಚ್ಚಿರಲಿ, ಎಣ್ಣೆ ಬೇಗ ಬಿಸಿಯಾಗಲಿ ಎಂಬ ಕಾರಣಕ್ಕೆ ಎಣ್ಣೆ ಅಂಶ ಇರುವ ಮತ್ತು ತಾಪಮಾನವೂ ಹೆಚ್ಚಿರುವ ಗೇರು ಬೀಜಗಳನ್ನು ಹಾಕುತ್ತಾರೆ.
ಆದ್ದರಿಂದ ಹೊಗೆ ಹೆಚ್ಚಾಗಿ ಕಟ್ಟಿಕೊಂಡಿದ್ದ ಹೊಗೆ ಪೈಪ್ ಕ್ಲೀನ್ ಮಾಡಲು ಫ್ಯಾಕ್ಟರಿಯ ಮೇಲ್ಛಾವಣಿಗೆ ಹತ್ತಿದ್ದ ಸಂದೇಶ್ ಆಯಾ ತಪ್ಪಿ ಸೀದಾ ಚಿಪ್ಸ್ ಕರೆಯುವ ದೊಡ್ಡ ಬಾಣಲೆಗೆ ಬಿದ್ದಿದ್ದಾರೆ. ಕುದಿಯತ್ತಿದ್ದ ಎಣ್ಣೆಗೆ ಬಿದ್ದುದರಿಂದ ಆತನ ದೇಹದ 80% ರಷ್ಟು ಭಾಗ ಸುಟ್ಟು ಹೋಗಿತ್ತು. ಬಳಿಕ ಶೃಂಗೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಕಳೆದ 13 ದಿನಗಳಿಂದ ಸಾವು -ಬದುಕಿನ ಮಧ್ಯೆ ಹೋರಾಡಿದ್ದ ಸಂದೇಶ್ ಚಿಕಿತ್ಸೆ ಫಲಕಾರಿಯಾಗದೆ ಇದೀಗ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಸಂದೇಶ್ ಮೇಲ್ಛಾವಣಿಗೆ ಹತ್ತಿದಾಗ ಕಬ್ಬಿಣದ ರಾಡ್ ಮೇಲೆ ನಡೆದು ಹೋಗಿದ್ದ್ರೆ ಯಾವುದೇ ಅನಾಹುತ ಸಂಭವಿಸುತ್ತಿರಲಿಲ್ಲ. ಆದರೆ ಸಂದೇಶ್ ಸಿಮೆಂಟ್ ಶೀಟ್ಗಳ ಮೇಲೆ ನಡೆದು ಹೋದ ಪರಿಣಾಮ ಆಯಾ ತಪ್ಪಿ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಆತನೇ ಬೆಂಕಿ ಹಾಕಿ ಕಾಯಿಸಿದ್ದ ಕುದಿಯತ್ತಿದ್ದ ಎಣ್ಣೆ ಬಾಣಲೆಗೆ ಬಿದ್ದು ತಲೆ ಹಾಗೂ ಕಾಲು ಬಿಟ್ಟು ದೇಹದ ಬಹುತೇಕ ಭಾಗ ಸುಟ್ಟು ಹೋಗಿತ್ತು. 13 ದಿನಗಳ ಕಾಲ ಸಾವು -ಬದುಕಿನ ಮಧ್ಯೆ ಹೋರಾಡಿದ ಸಂದೇಶ್ ಸಾವನ್ನಪ್ಪಿದ್ದಾನೆ.