

ಕುಂದಾಪುರ :ಇನ್ನೋವಾ ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಈ ಘಟನೆ ಕೋಟೇಶ್ವರ ಸಮೀಪದ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ ನಡೆದಿದೆ.
ಗಾಯಾಳುಗಳನ್ನು ಕೇರಳ ಕಣ್ಣೂರಿನ ನಿವಾಸಿಗಳಾದ ನಾರಾಯಣ, ಚಿತ್ರಾ, ಅನಿತಾ ಹಾಗೂ ವತ್ಸಲಾ ಎಂದು ಗುರುತಿಸಲಾಗಿದೆ.ಕುಂದಾಪುರದಿಂದ ಕೇರಳದ ಕಡೆ ಇನ್ನೋವಾ ಕಾರು ಚಲಿಸುತ್ತಿತ್ತು. ಈ ವೇಳೆ ಹಿಂದಿನಿಂದ ಬಂದ ಇನ್ಸುಲೇಟರ್ ಲಾರಿಯ ಎಡಬದಿಯ ಟೈರ್ ಸ್ಫೋಟಗೊಂಡಿದ್ದು, ಕಾರಿಗೆ ಡಿಕ್ಕಿ ಹೊಡೆದು 100 ಮೀಟರ್ ಎಳೆದುಕೊಂಡು ಹೋಗಿ ಪಲ್ಟಿಯಾಗಿದೆ.
ಡಿಕ್ಕಿಯ ರಭಸಕ್ಕೆ ಇನ್ನೋವಾ ಕಾರಿಗೆ ರಸ್ತೆ ಬದಿಯಲ್ಲಿ ಅಳವಡಿಸಿದ್ದ ಪ್ಲೆಕ್ಸಿನ ಕಬ್ಬಿಣದ ರಾಡು ಅಡ್ಡ ಸಿಕ್ಕಿದ ಪರಿಣಾಮ ಕಾರಿನ ಮೇಲ್ಬಾಗದ ಚಾವಣಿ ನುಜ್ಜು ಗುಜ್ಜಾಗಿ ಹಾರಿಹೋಗಿದೆ. ಅಲ್ಲದೇ ಕಾರಿನ ಹಿಂಭಾಗ ಮತ್ತು ಮುಂಭಾಗ ಕೂಡ ಸಂಪೂರ್ಣ ಜಖಂಗೊಂಡಿದೆ.ಘಟನೆ ನಡೆದ ತಕ್ಷಣವೇ ಪೊಲೀಸರು ಮತ್ತು ಸಾರ್ವಜನಿಕರ ಸಹಾಯದಿಂದ ಗಾಯಳುಗಳನ್ನು ಕೊಟೇಶ್ವರದ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವಘಡದಲ್ಲಿ ಲಾರಿ ಚಾಲಕನಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.








