


ಹೊಸದಿಲ್ಲಿ: ತನ್ನ ಮತ್ತು ವಿಮಾನದ ತಯಾರಕ ಬೋಯಿಂಗ್ ವಿರುದ್ಧ ದಾವೆಯನ್ನು ಹೂಡುವ ಹಕ್ಕನ್ನು ಬಿಟ್ಟುಕೊಟ್ಟರೆ ಹೆಚ್ಚುವರಿ ನಗದು ಪರಿಹಾರವನ್ನು ನೀಡುವ ಕೊಡುಗೆಯನ್ನು ಏರ್ ಇಂಡಿಯಾ ಜೂ.12ರ ವಿಮಾನ ಅಪಘಾತದಲ್ಲಿ ಮೃತರ ಕುಟುಂಬಗಳ ಮುಂದಿರಿಸಿದೆ ಎನ್ನಲಾಗಿದೆ.

ಕಳೆದ ವರ್ಷದ ಜೂನ್ನಲ್ಲಿ ಅಹ್ಮದಾಬಾದ್ ವಿಮಾನ ನಿಲ್ದಾಣದ ಸಮೀಪ ಏರ್ಇಂಡಿಯಾದ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನವು ಪತನಗೊಂಡು ಓರ್ವನನ್ನು ಹೊರತುಪಡಿಸಿ ಅದರಲ್ಲಿದ್ದ ಎಲ್ಲ 242 ಜನರು ಮೃತಪಟ್ಟಿದ್ದರು. ವಿಮಾನ ಮೆಡಿಕಲ್ ಕಾಲೇಜು ಹಾಸ್ಟೆಲ್ಗೆ ಅಪ್ಪಳಿಸಿದ್ದರಿಂದ ಇನ್ನೂ 19 ಜನರು ಸಾವನ್ನಪ್ಪಿದ್ದರು,ಇತರ ಹಲವರು ಗಾಯಗೊಂಡಿದ್ದರು.
ಅಪಘಾತಕ್ಕೀಡಾದ ವಿಮಾನವು ತಾಂತ್ರಿಕ ವೈಫಲ್ಯಗಳ ಇತಿಹಾಸವನ್ನು ಹೊಂದಿತ್ತು.
ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರವನ್ನು ಘೋಷಿಸಿತ್ತು ಮತ್ತು ಟಾಟಾಗ್ರೂಪ್ ಪ್ರತಿ ಕುಟುಂಬಕ್ಕೆ ಒಂದು ಕೋಟಿ ರೂ.ನೀಡುವುದಾಗಿ ಭರವಸೆ ನೀಡಿತ್ತು. ಏರ್ ಇಂಡಿಯಾ ಈಗ ತನ್ನ ಮತ್ತು ಬೋಯಿಂಗ್ ವಿರುದ್ಧ ಮೊಕದ್ದಮೆಯನ್ನು ಹೂಡುವ ಹಕ್ಕನ್ನು ಕಾಯಂ ಆಗಿ ಬಿಟ್ಟುಕೊಡುವ ಸಂತ್ರಸ್ತ ಕುಟುಂಬಗಳಿಗೆ ಹೆಚ್ಚುವರಿಯಾಗಿ 10ರಿಂದ 20 ಲಕ್ಷ ರೂ.ಪರಿಹಾರವನ್ನು ನೀಡುವ ಕೊಡುಗೆಯನ್ನು ಮುಂದಿರಿಸಿದೆ ಎಂದು Independent ಸುದ್ದಿಸಂಸ್ಥೆಯು ವರದಿ ಮಾಡಿದೆ.
ವರದಿಯ ಪ್ರಕಾರ ಯಾವುದೇ ಪ್ರಸಕ್ತ ಅಥವಾ ಭವಿಷ್ಯದ ಮೊಕದ್ದಮೆಗಳಲ್ಲಿ ಭಾಗಿಯಾಗುವ ಹಕ್ಕನ್ನು ತ್ಯಜಿಸುವ ಹಾನಿ ಪರಿಹಾರ ದಾಖಲೆಗೆ ಸಹಿ ಮಾಡುವ ಕುಟುಂಬಗಳಿಗೆ ಏರ್ ಇಂಡಿಯಾ ಹೆಚ್ಚುವರಿ ಹಣವನ್ನು ಪಾವತಿಸಲಿದೆ.
‘ಕಳೆದ ಏಳು ದಿನಗಳಲ್ಲಿ ಈ ಹಿಂದೆ ಮಧ್ಯಂತರ ಪರಿಹಾರವಾಗಿ ಪಾವತಿಸಿದ್ದ 25 ಲಕ್ಷ ರೂ.ಗಳು ಸೇರಿದಂತೆ ಅಂತಿಮ ಪರಿಹಾರವಾಗಿ 35 ಲಕ್ಷ ರೂ.ಗಳನ್ನು ನೀಡುವ ಪ್ರಸ್ತಾವವನ್ನು ಒಂದು ಕುಟುಂಬದ ಮುಂದೆ ಇರಿಸಲಾಗಿದ್ದು,ಅದಕ್ಕೆ ಸಹಿ ಹಾಕದಂತೆ ನಾವು ಅವರಿಗೆ ಸೂಚಿಸಿದ್ದೇವೆ. ಈ ಪ್ರಸ್ತಾವವನ್ನು ನಾವು ವಿರೋಧಿಸುತ್ತೇವೆ. ತನಿಖೆ ಇನ್ನೂ ಪ್ರಗತಿಯಲ್ಲಿರುವಾಗ ಎಲ್ಲ ಕಾನೂನು ಹಕ್ಕುಗಳನ್ನು ಬಿಟ್ಟುಕೊಡುವಂತೆ ಏರ್ ಇಂಡಿಯಾ ದುಃಖತಪ್ತ ಕುಟುಂಬಗಳಿಗೆ ಸೂಚಿಸುತ್ತಿದೆ. ಸಂಪೂರ್ಣ ಸತ್ಯ ಇನ್ನೂ ಹೊರಗೆ ಬಂದಿಲ್ಲ ಮತ್ತು ಅಪಘಾತಕ್ಕೆ ಯಾರು ಹೊಣೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಮೆರಿಕ ಮೂಲದ ಚಿಯೊನುಮಾ ಕಾನೂನು ಸಂಸ್ಥೆಯ ಕೇಸ್ ಮ್ಯಾನೇಜರ್ ಆಯುಷ್ ದುಬೆ ಸುದ್ದಿಸಂಸ್ಥೆಗೆ ತಿಳಿಸಿದರು. ಸಂಸ್ಥೆಯು ಮೃತ 260 ಜನರ ಪೈಕಿ 103 ಜನರ ಕುಟುಂಬಗಳನ್ನು ಮತ್ತು 67 ಗಾಯಾಳುಗಳನ್ನು ಪ್ರತಿನಿಧಿಸುತ್ತಿದೆ.
ಲಂಡನ್ನ ಹಲವು ಕುಟುಂಬಗಳು ಏರ್ ಇಂಡಿಯಾ ವಿರುದ್ಧ ವೈಯಕ್ತಿಕ ಮೊಕದ್ದಮೆಗಳನ್ನು ದಾಖಲಿಸಿದ್ದರೆ ಮೃತ ನಾಲ್ವರು ಪ್ರಯಾಣಿಕರ ಕುಟುಂಬಗಳು ಅಪಘಾತಕ್ಕೆ ಬೋಯಿಂಗ್ ಮತ್ತು ಇಂಧನ ಸ್ವಿಚ್ಗಳ ತಯಾರಕ ಹನಿವೆಲ್ ಅನ್ನು ಹೊಣೆಯಾಗಿಸಿ ಅವುಗಳ ವಿರುದ್ಧ ಮೊದ್ದಮೆ ದಾಖಲಿಸಿವೆ.








