


1978 ರಲ್ಲಿ ಅಳಕೆಮಜಲು ಎಂಬಲ್ಲಿ ಚಿಕ್ಕ ಗುಡಿಯಲ್ಲಿ ಶ್ರೀ ದೇವಿಯನ್ನು ಆರಾಧಿಸಿಕೊಂಡು ಬರಲಾಗಿತ್ತು. ಕಾಲಕ್ರಮೇಣ ಐದು ವರ್ಷಗಳ ಬಳಿಕ ಊರ ಭಕ್ತಾದಿಗಳ ಹಾಗೂ ದಾನಿಗಳ ಸಹಕಾರದೊಂದಿಗೆ ಶ್ರೀ ಶಾರದಾಂಬಾ ಭಜನಾ ಮಂದಿರವನ್ನು ಈ ಜಾಗದಲ್ಲಿ ನಿರ್ಮಿಸಿ ನಂತರದ ದಿನಗಳಲ್ಲಿ ಪ್ರತೀ ವರ್ಷ ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಶ್ರೀ ದೇವಿಯು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ಭಕ್ತಾದಿಗಳ ಮನ ಮನೆಗಳಲ್ಲಿ ನೆಲೆಸಿದ್ದಾರೆ. ವಿವಾಹ ಭಾಗ್ಯ, ಸಂತಾನ ಭಾಗ್ಯ, ಆರ್ಥಿಕ ನಷ್ಟ, ನಿರುದ್ಯೋಗ ಸಮಸ್ಯೆ ಹೀಗೆ ಎಲ್ಲಾ ರೀತಿಯ ಕಷ್ಟಗಳನ್ನು ದೇವಿ ಸನ್ನಿಧಿಯಲ್ಲಿ ಭಕ್ತಾದಿಗಳು ಪ್ರಾರ್ಥಿಸಿಕೊಂಡರೇ ತಕ್ಷಣವೇ ತಮ್ಮ ಕಷ್ಟಗಳಿಗೆ ಭಕ್ತಾದಿಗಳು ಪರಿಹಾರ ಕಂಡುಕೊಂಡ ನಿದರ್ಶನಗಳು ಅನೇಕವಿದೆ.

ಕಳೆದ 41 ವರ್ಷಗಳಿಂದ ಈ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಮತ್ತು ಶಾರದೋತ್ಸವ ಕಾರ್ಯಕ್ರಮ ಬಹಳ ಅದ್ದೂರಿಯಿಂದ ನಡೆಯುತ್ತಾ ಬಂದಿದ್ದು, ಈ ಬಾರಿಯ 42ನೇ ವರ್ಷದ ನವರಾತ್ರಿ ಉತ್ಸವ ಮತ್ತು ಶಾರದೋತ್ಸವ ಕಾರ್ಯಕ್ರಮವು ಶ್ರೀ ಶಾರದಾಂಬ ಭಜನಾ ಮಂದಿರ ಅಶೋಕನಗರದಲ್ಲಿ ಅ.3ನೇ ಗುರುವಾರದಿಂದ 11ನೇ ಶುಕ್ರವಾರದವರೆಗೆ ವಿವಿಧ ವೈದಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ಅದ್ದೂರಿಯಾಗಿ ನಡೆಯಿತು.

ಅ. 3ರಿಂದ 8ರವರೆಗೆ ಪ್ರತಿ ದಿನ ರಾತ್ರಿ ಭಜನೆ ಕಾರ್ಯಕ್ರಮ ನಡೆಯಿತು. ಅ. 6 ನೇ ಆದಿತ್ಯವಾರ ಪುರುಷರ ಗ್ರಾಮ ಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಿತು. ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.


ಅ.9 ನೇ ಬುಧವಾರ ಬೆಳಗ್ಗೆ ಗಣಪತಿ ಹವನ ನಡೆದು ಬಳಿಕ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಮೂರ್ತಿ ಪ್ರತಿಷ್ಠೆ ನಡೆದು, ನಂತರ ಶ್ರೀ ದೇವಿಗೆ ವಿವಿಧ ಪೂಜಾ ವಿಧಿ ವಿಧಾನಗಳು ಪ್ರಾರಂಭಗೊಂಡವು. ನಂತರ ಮನೆ ತುಂಬಿಸಲು ತೆನೆ ವಿತರಣೆ, ಮಕ್ಕಳಿಗೆ ಅಕ್ಷರಭ್ಯಾಸ ನಡೆಯಿತು. ನಂತರ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ರಾತ್ರಿ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಯಕ್ಷಸಾರಥಿ ಯಕ್ಷಕಲಾ ಬಳಗ ಪುತ್ತೂರು ಇವರಿಂದ “ಶ್ರೀ ದೇವಿ ಲೀಲೆ” ಯಕ್ಷಗಾನ ಪ್ರಸಂಗ ನಡೆಯಿತು. ಅ. 10 ನೇ ಗುರುವಾರ ಬೆಳಿಗ್ಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ನಂತರ ಫ್ರೌಢಶಾಲಾ ಬಾಲಕರ ಕಬಡ್ಡಿ ಪಂದ್ಯಾಟ ನಡೆಯಿತು. ಬಳಿಕ ಭಜನಾ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ನಂತರ ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಶ್ರೀ ದುರ್ಗಾ ಕಲಾ ತಂಡ ಪುಗರ್ತೆ ಕಲಾವಿದೆರ್ ವಿಟ್ಲ ಮೈರ, ಕೇಪು ಅಭಿನಯದ “ಕಾಂಚನ” ನೈಜ ಘಟನೆ ಆಧಾರಿತ ಕುತೂಹಲ ಭರಿತ ಸಾಮಾಜಿಕ ನಾಟಕ ನಡೆಯಿತು.

ಅ. 11 ನೇ ಶುಕ್ರವಾರ ಬೆಳಿಗ್ಗೆ ಪೂಜೆ ಸೇವೆ ಆರಂಭವಾಗಿ ಬಳಿಕ ಭಜನೆ ನಡೆದು ನಂತರ ಮಧ್ಯಾಹ್ನ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಬಳಿಕ ಸಂಜೆ ಮಹಾಮಂಗಳಾರತಿ- ದಿಗ್ವಿಜಯೋತ್ಸವ ವಂದೇ ಮಾತರಂ, ಹೇಳಿ ನಂತರ ಕುಣಿತ ಭಜನೆಯೊಂದಿಗೆ ಅದ್ದೂರಿ ಮೆರವಣಿಗೆಯ ಮೂಲಕ ಶ್ರೀ ದೇವಿಯ ಮೂರ್ತಿ ಜಲಸ್ತಂಭನ ನಡೆಯಿತು.


