ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಾತಿಗೆ ಮನೆ ಬಾಗಿಲಿಗೆ ಬಂದು ಅವಮಾನಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡೂರು ತಾಲ್ಲೂಕಿನ ತಂಗಲಿ ಗ್ರಾಮದಲ್ಲಿ ವರದಿಯಾಗಿದೆ.
ದೇವೀರಮ್ಮ(58) ಎಂಬವರೇ ಫೈನಾನ್ಸ್ ಸಿಬ್ಬಂದಿಯ ಅವಮಾನಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮಹಿಳೆ . ದೇವೀರಮ್ಮ ಅವರು ಗ್ರಾಮೀಣ ಕೂಟ ಎಂಬ ಹೆಸರಿನ ಮೈಕ್ರೋ ಫೈನಾನ್ಸ್ ಮೂಲಕ ಸಾಲ ಪಡೆದಿದ್ದು, ಸಾಲದ ಕಂತನ್ನು ಪಾವತಿ ಮಾಡಿಲ್ಲ ಎಂದು ಗ್ರಾಮೀಣ ಕೂಟದ ಸಿಬ್ಬಂದಿ ಅವರ ಮನೆಯ ಮುಂದೆ ಸಾಲ ಕೇಳುವ ನೆಪದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ್ದು, ದೇವೀರಮ್ಮ ಅವರ ಪುತ್ರ ರಾಘವೇಂದ್ರ, ದೇವೀರಮ್ಮ ಹಾಗೂ ಫೈನಾನ್ಸ್ ಸಿಬ್ಬಂದಿ ನಡುವೆ ಚರ್ಚೆ ನಡೆದಿದ್ದು, ಅಂತಿಮವಾಗಿ ಪುತ್ರ ರಾಘವೇಂದ್ರ ಅವರು ಹಣ ಪಾವತಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಫೈನಾನ್ಸ್ ಸಿಬ್ಬಂದಿ ತೆರಳಿದ್ದಾರೆ ಎನ್ನಲಾಗಿದೆ.
ಆದರೆ ಘಟನೆ ನಡೆದ ದಿನ ರಾತ್ರಿ ಊಟ ಮುಗಿಸಿ ಮಲಗಲು ತೆರಳಿದ ದೇವೀರಮ್ಮ ತಮ್ಮ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದು, ಬೆಳಗ್ಗೆ ಮನೆ ಮಂದಿಗೆ ಆತ್ಮಹತ್ಯೆ ವಿಷಯ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಪುತ್ರ ರಾಘವೇಂದ್ರ ಗ್ರಾಮೀಣ ಕೂಟದ ಮೇಲ್ವಿಚಾರಕ ಶಂಕರಾನಾಯ್ಕ ಸಿಬ್ಬಂದಿ ರುಬೀನ, ಉಷಾ ಎಂಬವರ ಅಮಾನುಷ ವರ್ತನೆಯಿಂದಲೇ ತಮ್ಮ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಬ್ಲೂ ಆರ್ಮಿ ಸಂಘಟನೆ ರಾಜ್ಯಾಧ್ಯಕ್ಷ ಶೂದ್ರ ಶ್ರೀನಿವಾಸ್ ಪತ್ರಿಕಾಗೋಷ್ಠಿ ನಡೆಸಿ, ” ಮೈಕ್ರೋ ಫೈನಾನ್ಸ್ ಗಳ ಕಾಟದಿಂದ ಬಹಳಷ್ಟು ಅಮಾಯಕರಿಗೆ ತೊಂದರೆಗೆ ಒಳಗಾಗುತ್ತಿದ್ದಾರೆ. ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಈ ರೀತಿಯ ಫೈನಾನ್ಸ್ಗಳ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ. ಘಟನೆ ಬಗ್ಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.