ಕೊಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಪ್ರವಾಸದ ನಿಮಿತ್ತ ತಡರಾತ್ರಿ ಕೊಲ್ಕತ್ತಾಗೆ ಆಗಮಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರ ತವರು ಜಿಲ್ಲೆ ಮಿಡ್ನಾಪುರಕ್ಕೆ ತೆರಳಲಿರುವ ಅವರು ರಾಮಕೃಷ್ಣ ಮಿಷನ್ ಮತ್ತು ಕಾಳಿ ಮಂದಿರಗಳಿಗೆ ಭೇಟಿ ನೀಡಲಿದ್ದಾರೆ.ಇಂದು ಮಧ್ಯಾಹ್ನ ಮಿಡ್ನಾಪುರದಲ್ಲಿ ಪಕ್ಷದ ಸಮಾವೇಶದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ.
ಈ ಸಮಾವೇಶದಲ್ಲೇ ಇತ್ತೀಚೆಗೆ ಸಚಿವಗಿರಿ ತೊರೆದು, ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ ಟಿಎಂಸಿಯ ಸುವೆಂದು ಅಧಿಕಾರಿ ಹಾಗೂ ಅವರ ಬೆಂಬಲಿಗರು ಈ ಸಮಾವೇಶದಲ್ಲಿ ಇಂದು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಅಂದ್ಹಾಗೆ ನಾಳೆ ಅಮಿತ್ ಶಾ ರೋಡ್ ಶೋ ನಡೆಸಲಿದ್ದು, ವಿಶ್ವ ಭಾರತಿ ವಿಶ್ವವಿದ್ಯಾಲಯ ಸೇರಿದಂತೆ ಹಲವು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.
2021ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಮುಗಿಯುವವರೆಗೂ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಪ್ರತಿ ತಿಂಗಳು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಪ. ಬಂಗಾಳ ಬಿಜೆಪಿಯ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿದ್ದಾರೆ.