ವಿಟ್ಲ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆಗಮಿಸಿ ವಿದ್ಯಾರ್ಥಿಗಳಿಗೆ ಆಶಯದ ನುಡಿಗಳನ್ನಾಡಿದರು.
ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ಕನಸು ಕಾಣಬೇಕು, ನಾನು ಮುಂದೆ ಏನಾಗಬೇಕು ಎಂಬುದರ ಬಗ್ಗೆ ದೊಡ್ಡ ಕನಸು ಕಾಣಬೇಕು, ಗುರಿಯಿಲ್ಲದ ಜೀವನದಿಂದ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ದುಡ್ಡಿದ್ದವ ಮಾತ್ರ ಯಶಸ್ಸು ಕಾಣುತ್ತಾನೆ ಎಂಬ ಮನೋಭಾವ ಬಿಟ್ಟು ಬಿಡಬೇಕು. ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಇಂಗ್ಲೀಷ್ ಮತ್ತು ಹಿಂದಿ ಭಾಷಾ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು, ಎಂದಿಗೂ ಧೈರ್ಯ ಕುಂದಬಾರದು. ನಾನು ಸಮಾಜದ ದೊಡ್ಡ ವ್ಯಕ್ತಿಯಾಗಬೇಕು ಎಂಬ ಉದ್ದೇಶ, ಕನಸು ನಿಮ್ಮಲ್ಲಿರಬೇಕು ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ಜೀವನದಲ್ಲಿ ಶಿಸ್ತು ಮುಖ್ಯವೇ ವಿನ: ಹಣವಲ್ಲ. ಅತ್ಯಮೂಲ್ಯ ಸಮಯವನ್ನು ಸದ್ವಿನಿಯೋಗಿಸಿಕೊಂಡು,ಬದುಕಿನ ಬಗ್ಗೆ ಸ್ಪಷ್ಟವಾದ ಪ್ಲಾನಿಂಗ್ ಇದ್ದು ಪ್ರಾಮಾಣಿಕ ದುಡಿಮೆ ಮಾಡಿದಾಗ ಯಶಸ್ಸು ಸಾಧ್ಯ. ಕೇವಲ ಹಣ ಇದ್ದ ಮಾತ್ರಕ್ಕೆ ಸಂಪಾದನೆ ಮಾಡಲು ಸಾಧ್ಯವಿಲ್ಲ. ಸಂಸ್ಕಾರ ಮತ್ತು ಒಳ್ಳೆಯತನ ನಮ್ಮಲ್ಲಿರಬೇಕಾಗುತ್ತದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲ ಪದ್ಮನಾಭ , ಅರ್ಥ ಶಾಸ್ತ್ರಜ್ಞ ಪ್ರೊ.ಶಾಂತರಾಮ, ನಿವೃತ್ತ ಉಪನ್ಯಾಸಕಿ ಪ್ರೊ.ಚಕ್ರೇಶ್ವರಿ ಭಾಗವಹಿಸಿದ್ದರು. ವಿದ್ಯಾರ್ಥಿ ಸಂಘದ ಹರ್ಷಿತಾ, ದೀಪಿಕಾ, ಮನುಶ್ರೀ, ನವೀನ್, ನವನೀತ್, ಗೀತಿಕಾ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಸೌಮ್ಯಾ ಹೆಚ್. ಸ್ವಾಗತಿಸಿದರು. ಪ್ರೊ.ಪರಮೇಶ್ವರಿ ವಂದಿಸಿದರು. ಉಪನ್ಯಾಸಕ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.