



ಪಡುಬಿದ್ರೆ: ಪಡುಬಿದ್ರೆ ಪಾದಬೆಟ್ಟು ಗ್ರಾಮದ ಕಾಮತ್ ಪೆಟ್ರೋಲ್ ಬಳಿ ಜೂ.೨೨ರಂದು ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ನಿವಾಸಿ ನೌಷಾದ್ ಬಿ.ಎ.(೩೮) ಬಂಧಿತ ಆರೋಪಿ. ಗಣೇಶ್ ಪ್ರಸಾದ್ ಶೆಟ್ಟಿ ಎಂಬವರ ಮನೆಗೆ ನುಗ್ಗಿದ ಕಳ್ಳರು, ೧,೪೫,೦೦೦ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಇಬ್ರಾಹಿಂ ಕಲಂದರ್(೪೨) ಹಾಗೂ ಮುಹಮ್ಮದ್ ರಿಯಾಜ್(೩೨) ಎಂಬವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಕಾರು ಹಾಗೂ ೨೪,೦೦೦ರೂ. ನಗದು ವಶ ಪಡಿಸಿಕೊಂಡಿದ್ದರು. ತನಿಖೆ ಮುಂದುವರೆಸಿದ ಪೊಲೀಸರು ಆ.೨೨ರಂದು ನೌಷದ್ನನ್ನು ಮಂಗಳೂರಿನಲ್ಲಿ ಬಂಧಿಸಿ, ೮೦೦೦೦ರೂ. ಮೌಲ್ಯದ ಚಿನ್ನವನ್ನು ಹಾಗೂ ೩೨೦೦೦ರೂ. ನಗದು ವಶಪಡಿಸಿಕೊಂಡಿದ್ದಾರೆ. ಒಟ್ಟಾರೆ ಈ ಪ್ರಕರಣದಲ್ಲಿ ಆರೋಪಿತರಿಂದ ೮ ಗ್ರಾಂ ಚಿನ್ನ ಹಾಗೂ ೫೬೦೦೦ ನಗದನ್ನು ವಶಪಡಿಸಿಕೊಳ್ಳಲಾಗಿದೆ.ನೌಷಾಧ್ ವಿರುದ್ಧ ಕೇರಳ ರಾಜ್ಯದ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ೧ ಸುಲಿಗೆ ಪ್ರಕರಣ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ, ಬೆಳ್ಳಾರೆ ಠಾಣೆಯಲ್ಲಿ ೧ ಸುಲಿಗೆ ಪ್ರಕರಣ, ಬೆಂಗಳೂರು ಮಾದನಾಯಕನಹಳ್ಳಿ ಠಾಣೆಯಲ್ಲಿ ೧ ಆರ್ಮ್ಸ್ ಕಾಯಿದೆ ಪ್ರಕರಣ, ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ಪೊಲೀಸ್ ಠಾಣೆಯಲ್ಲಿ ತಲಾ ೧ ಪ್ರಕರಣ, ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ಪೊಲೀಸ್ ಠಾಣೆಯಲ್ಲಿ ೧ ಕಳ್ಳತನ ಪ್ರಕರಣ ಹಾಗೂ ಬೆಂಗಳೂರು ನಗರ ತಗಲಗಟ್ಟಿಪುರ ಠಾಣೆಯಲ್ಲಿ ೧ ಕಳ್ಳತನ ಪ್ರಕರಣ, ಸುಲಿಗೆ ಪ್ರಕರಣ ದಾಖಲಾಗಿದ್ದು, ಆರೋಪಿತ ಒಟ್ಟು ೮ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.








