







ಬಜಪೆ: ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಬಜಪೆಯಲ್ಲಿ ನಡೆದಿದೆ.
ಮೃತಪಟ್ಟ ಯುವಕ ಮೂಡುಪೆರಾರ ಕಾಯರಾಣೆ ನಿವಾಸಿ ದಿ| ಆನಂದ ಪೂಜಾರಿ ಅವರ ಪುತ್ರ ಪ್ರದೀಪ್ ಪೂಜಾರಿ (31) ಎಂದು ಗುರುತಿಸಲಾಗಿದೆ.
ಮೂಡುಪೆರಾರ ಕಾಯರಾಣೆಯಲ್ಲಿ ರವಿವಾರ ಸಂಜೆ ಕ್ರಿಕೆಟ್ ಆಡುವಾಗ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಕೈಕಂಬ ಖಾಸಗಿ ಆಸ್ಪತ್ರೆ ಕರೆದೊಯ್ಯಲಾಗಿತ್ತು. ಅಲ್ಲಿ ಔಷಧ ತೆಗೆದುಕೊಂಡು ಬಳಿಕ ಬಜಪೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಆ್ಯಂಬ್ಯುಲೆನ್ಸ್ ನಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲಿ ಅವರು ಮೃತಪಟ್ಟರು. ಮೃತರು ತಾಯಿ, ಸಹೋದರ, ಸಹೋದರಿಯನ್ನು ಆಗಲಿದ್ದಾರೆ.
ಪಡುಪೆರಾರ ಗ್ರಾಮ ಪಂಚಾಯತ್ ಸಿಬ್ಬಂದಿಯಾಗಿದ್ದ ಅವರು ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯಾಭಿವೃದ್ಧಿ ಸಂಘ ಇದರ ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷರಾಗಿದ್ದರು. 2012ರಲ್ಲಿ ಪಡುಪೆರಾರ ಗ್ರಾಮ ಪಂಚಾಯತ್ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ್ದರು. ಕಾಯರಾಣೆ ನವರಂಗ ಫ್ರೆಂಡ್ಸ್ನ ಕಾರ್ಯದರ್ಶಿಯಾಗಿದ್ದರು. ಬಜರಂಗದಳದ ಕಾರ್ಯಕರ್ತ, ಜವನೆರ್ ಪೆರಾರ್ ಸದಸ್ಯರಾಗಿದ್ದರು.