ಬೆಂಗಳೂರು: ಬೆಂಗಳೂರಿನ ಜೆಪಿ ನಗರದಲ್ಲಿ ಮಕ್ಕಳು ಹಠ ಮಾಡುತ್ತಾರೆಂದು ಮಲತಾಯಿಯ ಮಾತು ಕೇಳಿ ಮೂವರು ಅಪ್ರಾಪ್ತ ಮಕ್ಕಳ ಮೇಲೆ ತಂದೆಯೇ ಚಾಕುವಿನಿಂದ ಹಲ್ಲೆ ಮಾಡಿರುವ ಕ್ರೌರ್ಯ ನಡೆದಿದೆ.
ಆರೋಪಿ ಸೆಲ್ವಾ ಕ್ರೂಸರ್ ಡ್ರೈವರ್ ಆಗಿದ್ದನು. ಆತನ ಮೊದಲ ಹೆಂಡತಿಯ ಮಕ್ಕಳ ಮೇಲೆ ಎರಡನೇ ಹೆಂಡತಿ ಮಾತು ಕೇಳಿ ತನ್ನ ಸ್ವಂತ ಮಕ್ಕಳ ಭುಜ, ಮೊಣಕೈ ಮತ್ತು ಪಾದಗಳಿಗೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ನೋವನ್ನು ತಡೆಯಲಾರದೆ ಮಕ್ಕಳು ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ಹತ್ತಿರದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿ ಮಕ್ಕಳನ್ನು ರಕ್ಷಿಸಿದ್ದಾರೆನ್ನಲಾಗಿದೆ.
ಆರೋಪಿ ಸೆಲ್ವನ ಮೊದಲ ಪತ್ನಿ ಅಂಜಲಿ ಮೂರು ತಿಂಗಳ ಹಿಂದಷ್ಟೇ ಮೃತಪಟ್ಟಿದ್ದರು. ಹೀಗಾಗಿ ಸೆಲ್ವ ಮೊದಲ ಪತ್ನಿಯ ಮೂವರು ಮಕ್ಕಳನ್ನು ಎರಡನೇ ಪತ್ನಿ ಸತ್ಯಾ ಮನೆಗೆ ಕರೆತಂದಿದ್ದು, ಸತ್ಯಾಗೆ ಇದು ಇಷ್ಟವಿರಲಿಲ್ಲ. ಸೆಲ್ವ ಕೆಲಸಕ್ಕೆ ಹೋಗಿ ವಾಪಸ್ ಮನೆಗೆ ಬರುತ್ತಿದ್ದಂತೆ ಮಕ್ಕಳ ಮೇಲೆ ದೂರು ನೀಡುತ್ತಿದ್ದಳು. ಹೀಗಾಗಿ ಎರಡನೇ ಪತ್ನಿ ಸತ್ಯಾಳ ಮಾತನ್ನ ಕೇಳಿ ಸ್ವಂತ ತಂದೆಯೇ ಮಕ್ಕಳ ಮೇಲೆ ಕ್ರೌರ್ಯ ಮೆರೆದಿರೋ ಘಟನೆ ಕಳವಳಕ್ಕೆ ಕಾರಣವಾಗಿದೆ. ಪೊಲೀಸರು ಇದೀಗ ಆರೋಪಿ ಸೆಲ್ವಾನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಮಾರಣಾಂತಿಕ ಹಲ್ಲೆಗೆ ಒಳಗಾದ ಮಕ್ಕಳನ್ನು ರಕ್ಷಿಸಿ ಬಾಲ ಭವನದಲ್ಲಿ ಆಶ್ರಯ ನೀಡಲಾಗಿದೆ.