ಬೆಂಗಳೂರು: ಕಳೆದ ಕೆಲ ತಿಂಗಳಿನಿಂದ ಭಾರಿ ಕೋಲಾಹಲ ಸೃಷ್ಟಿಸಿ ಇದೀಗ ಕರೊನಾ ಎರಡನೆಯ ಅಲೆಯ ನಡುವೆ ತಣ್ಣಗಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧದ ಸಿಡಿ ಕೇಸ್ ಪುನಃ ಮುನ್ನೆಲೆಗೆ ಬಂದಿದೆ.
ಸಿಡಿಯಲ್ಲಿರುವ ಯುವತಿ ಕಮಿಷನರ್ ಕಮಲ್ ಪಂತ್ ಅವರಿಗೆ ಪತ್ರ ಬರೆದಿದ್ದು, ಇದರಲ್ಲಿ ಜಾರಕಿಹೊಳಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಕೂಡ ಪತ್ರ ಬರೆದು ಇದೇ ರೀತಿಯ ಆರೋಪ ಮಾಡಿದ್ದ ಯುವತಿ, ಇದೀಗ ಮತ್ತೊಂದು ಪತ್ರ ಬರೆದಿದ್ದಾರೆ.
ತಮ್ಮ ವಕೀಲರಾದ ಸೂರ್ಯ ಮುಕುಂದರಾಜ್ ಮತ್ತು ಜಗದೀಶ್ ಕುಮಾರ್ ಅವರಿಗೆ ಜಾರಕಿಹೊಳಿ ಅವರು ಆಮಿಷ ತೋರಿಸುತ್ತಿದ್ದಾರೆ, ಸಾಕ್ಷ್ಯ ನಾಶ ಮಾಡಲು ರಮೇಶ್ ಜಾರಕಿಹೊಳಿ ಯತ್ನಿಸುತ್ತಿದ್ದು, ತಮ್ಮ ಪರ ವಕೀಲರಿಗೆ ಕೋಟಿಗಟ್ಟಲೇ ಆಫರ್ ನೀಡಿದ್ದಾರೆ ಎಂದು ಯುವತಿ ಪತ್ರದಲ್ಲಿ ದೂರಿದ್ದಾರೆ.
ರಮೇಶ್ ಜಾರಕಿಹೊಳಿಯವರನ್ನು ಕೂಡಲೇ ಬಂಧಿಸಿ ಎಂದು ಅವರು ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಮಗನ ಸ್ನೇಹಿತ ಅಮರ್ನಾಥ್ ಎನ್ನುವವರಿಂದ ಫೋನ್ಕಾಲ್ ಬಂದು ಆಮಿಷ ಒಡ್ಡಲಾಗುತ್ತಿದೆ, ಜತೆಗೆ ವಾಟ್ಸ್ಆಯಪ್ ಕಾಲ್ ಕೂಡ ಬರುತ್ತಿದೆ. ವಕೀಲರು, ತನಿಖಾಧಿಕಾರಿ ಗಮನಕ್ಕೆ ಈ ವಿಷಯ ತರ್ತಿನಿ ಎಂದ ಕೂಡಲೇ ಕರೆ ಕಟ್ ಮಾಡುತ್ತಿದ್ದಾರೆ. 15 ದಿನಗಳಿಂದ ವಕೀಲರಿಗೆ ಕೋಟಿ ಕೋಟಿ ಆಮಿಷ ಒಡ್ಡಿದ್ದಾರೆ ಎಂದು ದೂರಿನಲ್ಲಿ ಯುವತಿ ಗಂಭೀರ ಆರೋಪ ಮಾಡಿದ್ದಾರೆ.