ಬೆಂಗಳೂರು: ರಾಬರ್ಟ್ ಸೇರಿದಂತೆ ಹಲವಾರು ಖ್ಯಾತ ಸಿನಿಮಾಗಳನ್ನು ನೀಡಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಕೊಲೆಗೆ ಸಂಚು ರೂಪಿಸಿದ್ದ ರಾಜೇಶ್ ಅಲಿಯಾಸ್ ಕರಿಯ ರಾಜೇಶ್ ಎಂಬ ರೌಡಿ ಶೀಟರ್ ಸಿಕ್ಕಿ ಬಿದ್ದಿದ್ದಾನೆ.
ಬಾಂಬೆ ರವಿ ರೌಡಿಯ ರೈಟ್ ಹ್ಯಾಂಡ್ ಆಗಿದ್ದ ರಾಜೇಶ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪುಡಿ ರೌಡಿಯಾಗಿದ್ದ ಈತ ಇಂಟರ್ನ್ಯಾಷನಲ್ ರೂಲರ್ ಆಗಲು ಹೋಗಿ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ಸ್ಕ್ವಾಡ್ನಿಂದ ಸಿಕ್ಕಿಬಿದ್ದಿದ್ದಾನೆ.
ರಾಜೇಶ್ ಅಲಿಯಾಸ್ ಕರಿಯ ರಾಜೇಶ್ ಎಂಬ ರೌಡಿ ಸೌತ್ ಬಾಸ್ ಎಂದು ಶಿಷ್ಯಂದಿರಿಂದ ಕರೆಸಿಕೊಂಡಿದ್ದನು. ಈತನ ಗ್ಯಾಂಗ್ ಗೆ ಇನ್ನೊಂದು ರೌಡಿ ಗ್ಯಾಂಗ್ ಆಗಿರುವ ಕತ್ರಿಗುಪ್ಪೆ ಲಿಂಗ ಮತ್ತು ಬಾಂಬೆ ರವಿ ನಡುವೆ ವೈರತ್ವವಿದ್ದು, ಈ ಕತ್ರಿಗುಪ್ಪೆ ಲಿಂಗನ ಸಹಚರ ಸೈಕಲ್ ರವಿ. ಈ ಸೈಕಲ್ ರವಿ ಜತೆ ನಿರ್ಮಾಪಕ ಉಮಾಪತಿ ಮತ್ತು ಅವರ ಸಹೋದರನ ಒಡನಾಟವಿದ್ದರಿಂದ ಬಾಂಬೆ ರವಿ ಜತೆ ಸೇರಿ ಇಂಟರ್ನ್ಯಾಷನಲ್ ಕಿಲಾಡಿಯಂತೆ ಬೆಳೆದ ಕರಿಯ ರಾಜೇಶ್, ಬಾಂಬೆ ರವಿ ಅಣತಿಯಂತೆ ನಿರ್ಮಾಪಕನ ಕೊಲೆಗೆ ಸ್ಕೆಚ್ ಹಾಕಿದ್ದನು. ಅವರನ್ನು ಕೊಲೆ ಮಾಡಲು ಕಳೆದ ವರ್ಷ ಯತ್ನಿಸಿದ್ದರು ಆದರೆ ಅದು ಸಫಲ ಆಗಿರಲಿಲ್ಲ. ಪೊಲೀಸರು ತನ್ನ ಬೆನ್ನ ಬೀಳಬಹುದು ಎಂಬ ಕಾರಣಕ್ಕೆ ರಾಜೇಶ್ ಎಸ್ಕೇಪ್ ಆಗಿದ್ದನು. ಈತನನ್ನು ಬಂಧಿಸಲು ಪೊಲೀಸರಿಂದ ಸ್ಪೆಷಲ್ ಟೀಂ ರೆಡಿಯಾಗಿದ್ದು, ದಕ್ಷಿಣ ವಿಭಾಗದ ಪೊಲೀಸರಿಂದ ಕರಿಯ ರಾಜೇಶ್ನಿಗೆ ಪೊಲೀಸರು ಬ್ಲ್ಯಾಗ್ ಡಾಕ್ ಎಂದು ಹೆಸರಿಟ್ಟು ‘ಆಪರೇಷನ್ ಬ್ಲ್ಯಾಕ್ ಡಾಗ್’ ಶುರು ಮಾಡಿದರು.
ನಿರಂತರವಾಗಿ ಕರಿಯ ರಾಜೇಶ್ನ ಹುಡುಕಾಟದಲ್ಲಿ ತೊಡಗಿದ್ದ ಪೊಲೀಸರಿಗೆ ಆತ ನೇಪಾಳದಲ್ಲಿ ಅಡಗಿರುವುದು ತಿಳಿಯಿತು. ಬೆಂಗಳೂರಿನಲ್ಲಿ ಆತ ಯಾರ ಜೊತೆ ಸಂಪರ್ಕದಲ್ಲಿದ್ದಾನೆಂದು ಪತ್ತೆ ಹಚ್ಚುತ್ತಿದ್ದ ಪೊಲೀಸರಿಗೆ ಈತ ನೇಪಾಳದಲ್ಲಿ ಇರುವುದು ತಿಳಿದಿದೆ. ಆದ್ದರಿಂದ ಪೊಲೀಸರು ಅಲ್ಲಿಯ ಸ್ಥಳೀಯ ಪೊಲೀಸರ ಸಹಾಯ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಕುರಿತಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಹನ್ನೊಂದು ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಬಳಿಕ ಎರಡು ತಿಂಗಳಿಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿದ್ದ ದಕ್ಷಿಣ ವಿಭಾಗದ ಪೊಲೀಸರು ಈಗ ರಾಜೇಶ್ ಅಲಿಯಾಸ್ ಕರಿಯ ರಾಜೇಶ್ನ್ನು ಬಂಧಿಸಿದ್ದಾರೆ.