ಬಂಟ್ವಾಳ: ಪೊಳಲಿ ಜಾತ್ರೋತ್ಸವದಲ್ಲಿ ಕಳೆದುಹೋದ ಕ್ಷೇತ್ರ ದ ಗಡಿಕಾರರಾದ ಅರ್ಕುಳ ಕಂಪ ಸದಾನಂದ ಆಳ್ವರ ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಹಿಂದಿರುಗಿಸಿದ ದೇವಸ್ಥಾನದ ಸಿಬ್ಬಂದಿ ರವಿ ಉಗ್ರಾಣಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಪೊಳಲಿ ರಥೋತ್ಸವದ ಮರುದಿನ ಉಳ್ಳಾಕ್ಲು ಮಗ್ರಂತಾಯಿ ದೈವದ ನೇಮದಂದು ಕ್ಷೇತ್ರದ ಗಡಿಕಾರರಾದ ಅರ್ಕುಳ ಕಂಪ ಸದಾನಂದ ಆಳ್ವರು ನೇಮ ಮುಗಿದು ಬೆಳಿಗ್ಗೆ ದೇವಸ್ಥಾನದ ಅತಿಥಿ ಗೃಹ ಪಲ್ಗುಣಿಯಲ್ಲಿ ಸ್ನಾನಕ್ಕೆಂದು ಹೋದವರು ತಮ್ಮ ಚಿನ್ನದ ಆಭರಣಗಳನ್ನು ಅಲ್ಲಿಯೇ ಬಿಟ್ಟು ಬಂದಿದ್ದರು. ಭಂಡಾರ ತಿರುಗಿ ತುಪ್ಪೆಕಲ್ಲು ಕ್ಷೇತ್ರಕ್ಕೆ ಬಂದ ನಂತರ ಸದಾನಂದ ಆಳ್ವರವರು ತಮ್ಮ ಮನೆಗೆ ಬಂದು ಮಧ್ಯಾಹ್ನದವರೆಗೂ ಈ ವಿಷಯ ಅವರ ಗಮನಕ್ಕೆ ಬಂದಿರಲಿಲ್ಲ.

ಚಿನ್ನಾಭರಣ ಗಮನಿಸಿದ ಸಿಬ್ಬಂದಿ ರವಿ ಉಗ್ರಾಣಿಯವರು ಆಡಳಿತ ಮೊಕ್ತೇಸರರಿಗೆ ತಿಳಿಸಿದ್ದು, ಪೊಳಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅವರು ಕರೆ ಮಾಡಿ ಸದಾನಂದ ಆಳ್ವರಿಗೆ ತಿಳಿಸಿದ್ದಾರೆ.

ಪ್ರಾಮಾಣಿಕತೆ ಮೆರೆದ ಸಿಬ್ಬಂದಿ ರವಿ ಉಗ್ರಾಣಿಯವರನ್ನು ಕ್ಷೇತ್ರದ ಪವಿತ್ರಪಾಣಿ ಮಾಧವ ಅಡಿಗರ ಸಮ್ಮುಖದಲ್ಲಿ ಬಹುಮಾನ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಅರ್ಕುಳ ಕಂಪ ದಯಾನಂದ ಆಳ್ವ, ದಿನೇಶ್ ಶೆಟ್ಟಿ ಕೊಟ್ಟಿಂಜ ಉಪಸ್ಥಿತರಿದ್ದರು.

