


ಬಂಟ್ವಾಳ: ಕರ್ತವ್ಯದಲ್ಲಿರುವಾಗಲೇ ಅರಣ್ಯ ಇಲಾಖೆಯ ದಿನಗೂಲಿ ಸಿಬ್ಬಂದಿಯೋರ್ವರು ಕಚೇರಿಯೊಳಗೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ. ಮೃತಪಟ್ಟವರನ್ನು ವೀರಕಂಭ ಮಜ್ಜೋನಿ ನಿವಾಸಿ ಜಯರಾಮ ಮೂಲ್ಯ ಎಂದು ಗುರುತಿಸಲಾಗಿದೆ.
ಜಯರಾಮ ಮೂಲ್ಯರವರು ಕಳೆದ ಸುಮಾರು 30 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು ನ.29ರಂದು ರಾತ್ರಿ ಪಾಳಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ವೇಳೆ ಇವರಿಗೆ ತಲೆಸುತ್ತು ಬರುವ ವಿಚಾರ ಇಲಾಖೆಯ ಜೊತೆ ಕೆಲಸಗಾರರಲ್ಲಿ ಹೇಳಿಕೊಂಡಿದ್ದರು ಎಂದು ತಿಳಿದುಬಂದಿದೆ.
ಅ ಬಳಿಕ ಇವರು ಇಲಾಖೆಯೊಳಗೆ ಒಬ್ಬನೇ ಕರ್ತವ್ಯದಲ್ಲಿದ್ದು, ಮುಂಬಾಗಿಲ ಚಿಲಕ ಹಾಕಿಕೊಂಡು ಕೋಣೆಯೊಳಗೆ ಮಲಗಲು ಹೋಗುವ ವೇಳೆ ಟೇಬಲ್ ಮೇಲೆ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಬೆಳಿಗ್ಗೆ ಸುಮಾರು 6.30 ವರೆಯವರೆಗೂ ಇಲಾಖೆಯ ಬಾಗಿಲು ಮುಚ್ಚಿಕೊಂಡಿದ್ದನ್ನು ಕಂಡು ಇಲಾಖೆಯ ಸಿಬ್ಬಂದಿ ಗಸ್ತು ಅರಣ್ಯ ಪಾಲಕ ಕಿಟಕಿ ಬಾಗಿಲು ತೆರದು ನೋಡಿದಾಗ ಟೇಬಲ್ ಮೇಲೆ ಬಿದ್ದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಬಾಗಿಲಿನ ಚಿಲಕ ಮುರಿದು ಒಳಗೆ ಹೋಗಿ ನೋಡಿದಾಗ ಆಗಾಗಲೇ ಮೃತಪಟ್ಟ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿದೆಯಾದರೂ ಕೂಡಲೇ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ, ಪರೀಕ್ಷೆ ನಡೆಸಿದಾಗ ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಮೃತರು ತಾಯಿ ಹಾಗೂ ಇಬ್ಬರು ಸಹೋದರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ.