ಬಂಟ್ವಾಳ : ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಸಾಕಾರಗೊಂಡ ನೂರಾರು ವರ್ಷದ ಕನಸು, ಸಾಕಾರಗೊಂಡ ನೂರಾರು ವರ್ಷದ ಕನಸು, ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಮತ್ತು ಅನಂತಾಡಿ ಗ್ರಾಮದ ಗಡಿಸ್ಥಳದಲ್ಲಿರುವ ಶ್ರೀಕ್ಷೇತ್ರ ಕರಿಂಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಂಪರ್ಕ ಸೇತುವೆ ಕೊನೆಗೂ ಸಾಕಾರಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ. ಇದರಿಂದಾಗಿ ಈ ಭಾಗದ ಸಾವಿರಾರು ಜನರ ಕನಸು ನನಸಾಗಿದೆ.

ನೂರಾರು ವರುಷಗಳ ಕನಸಾಗಿದ್ದ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮದ ಸಂಪರ್ಕ ರಸ್ತೆಯ ರಚನೆಗೆ ಕಳೆದ ನಾಲ್ಕು ವರ್ಷದ ಹಿಂದೆ ಶ್ರೀಕ್ಷೇತ್ರ ಕರಿಂಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ವಿಶೇಷ ಚಾಲನೆ ದೊರೆಯಿತು. ಜೀಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅವಿರತ ಹೋರಾಟ, ಸ್ಥಳೀಯರಾದ ಕೆ.ಟಿ. ಸುವರ್ಣ ಕರಿಂಕ, ಮಂಗಳೂರು ಮತ್ತು ಶ್ರೀ ರಾಧಾಕೃಷ್ಣ ಭಾಗವತ್ ಕರಿಂಕ ಇವರ ಸ್ಥಳದಾನದಿಂದ ಶ್ರೀ ಕ್ಷೇತ್ರಕ್ಕೆ ಸಂಪರ್ಕ ರಸ್ತೆ ರಚನೆಯಾಯಿತು.

ಜಾತ್ರೆ, ಬ್ರಹ್ಮಕಲಶ ಹಾಗೂ ಇನ್ನಿತರ ಶುಭ ಸಮಾರಂಭ ನಡೆಯುವ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರಿಗೆ ಸಂಪರ್ಕ ಸೇತುವೆಯ ಕೊರತೆಯಿಂದಾಗಿ ಕೂಗಳತೆಯ ದಾರಿಗೆ ಹತ್ತಾರು ಕಿಲೋ ಮೀಟರ್ ಸುತ್ತಿಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಇತ್ತು. ಪುರಾಣ ಪ್ರಸಿದ್ಧ ದೇವಸ್ಥಾನವನ್ನು ಸಂದರ್ಶಿಸಲು ಬರುವ ಭಕ್ತರಿಗಂತೂ ಇದರಿಂದ ಭಾರಿ ಅನಾನುಕೂಲವಾಗಿತ್ತು. ಇದನ್ನು ಮನಗಂಡು ದೇವಸ್ಥಾನಕ್ಕೆ ಸಂಬ0ಧಿಸಿದ ಸಮಿತಿಯವರು ಹಾಗೂ ಊರ ಜನರ ಬೇಡಿಕೆಯ ಮೇರೆಗೆ ಮಾನ್ಯ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಶಿಫಾರಸ್ಸು ಹಾಗೂ ಮಾನ್ಯ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಇವರ ಅನುದಾನ ರೂಪಾಯಿ 50 ಲಕ್ಷ ವೆಚ್ಚದಲ್ಲಿ ನೂತನ ಸಂಪರ್ಕ ಸೇತುವೆ ರಚನೆಗೊಂಡಿದೆ.

ಇದರಿಂದ ಬಹುಕಾಲದ ಕನಸೊಂದು ನನಸಾಗಿದೆ. ದೇವಸ್ಥಾನವನ್ನು ಸಂಪರ್ಕಿಸುವ ಸೇತುವೆ ಹಾಗೂ ರಸ್ತೆಯಿಂದಾಗಿ ದಿನನಿತ್ಯದ ವ್ಯವಹಾರಕ್ಕೆ ತೆರಳುವ ಸ್ಥಳೀಯರಿಗೆ ವಿಟ್ಲ, ಕಲ್ಲಡ್ಕ ಮತ್ತು ಪುತ್ತೂರು ನಡುವಿನ ಪ್ರಯಾಣಿಸಲು ತುಂಬಾ ಅನುಕೂಲವಾಗಿದೆ. ಇದಕ್ಕೆಲ್ಲಾ ಕಾರಣಿಕ ಕ್ಷೇತ್ರ ಶ್ರೀ ದುರ್ಗಾಪರಮೇಶ್ವರಿ ದೇವಿಯ ಅನುಗ್ರಹವೇ ಕಾರಣವೆಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.

ಶ್ರೀ ಕೆ.ಟಿ ಸುವರ್ಣ ಕರಿಂಕ ಮತ್ತು ಶ್ರೀ ರಾಧಾಕೃಷ್ಣ ಭಾಗವತ್ ಕರಿಂಕ ಇವರು ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಉಚಿತವಾಗಿ ಸ್ಥಳದಾನ ಮಾಡಿರುವುದರಿಂದ ಶ್ರೀಕ್ಷೇತ್ರ ಕರಿಂಕಕ್ಕೆ ಆಗಮಿಸುವ ಭಕ್ತಾದಿಗಳಿಗೆ ತುಂಬಾ ಅನುಕೂಲವಾಗಿದೆ ಎಂದು ಶ್ರೀ ಹರ್ಷೇಂದ್ರ ಡಿ ಶೆಟ್ಟಿ, ಬಾಳಿಕೆ ಆಡಳಿತಾಧಿಕಾರಿಗಳು, ಶ್ರೀ ಕ್ಷೇತ್ರ ಕರಿಂಕ ಇವರು ತಿಳಿಸಿದ್ದಾರೆ.

ಸಂಪರ್ಕ ಸೇತುವೆಯಿಂದ ಶ್ರೀ ದೇವಿಯ ದರ್ಶನ ಪಡೆಯಲು ಬರುವ ಭಕ್ತಾದಿಗಳ ಬಹುಕಾಲದ ಕನಸು ನನಸಾಗಿದೆ. ಶ್ರೀಕ್ಷೇತ್ರದ ಭಕ್ತರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ ಎಂದು ಶ್ರೀ ಬಿ ನರೇಂದ್ರ ರೈ, ನೆಲ್ತೊಟ್ಟು ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ ಶ್ರೀಕ್ಷೇತ್ರ ಕರಿಂಕ ಇವರು ಹೇಳಿದರು

ಶ್ರೀ ಕ್ಷೇತ್ರ ಕರಿಂಕದಲ್ಲಿ ನಿರ್ಮಾಣವಾಗಿರುವ ಹೊಸ ಸೇತುವೆಯಿಂದಾಗಿ ನೆಟ್ಲಮುಡ್ನೂರು ಅನಂತಾಡಿ ಮತ್ತು ಸ್ಥಳೀಯ ಸುಮಾರು ಗ್ರಾಮದವರಿಗೆ ಶ್ರೀ ದೇವಿಯ ದರ್ಶನ ಪಡೆಯಲು ಸುತ್ತು ಬಳಸಿ ಬರುವುದು ತಪ್ಪಲಿದೆ ಎಂದು ಶ್ರೀ ಬಿ ಎಸ್ ಸಂಕಪ್ಪ ರೈ, ಕರಿಂಕ ಅಧ್ಯಕ್ಷರು, ಜೀರ್ಣೋದ್ದಾರ ಸಮಿತಿ ಶ್ರೀಕ್ಷೇತ್ರ ಕರಿಂಕ ಅಭಿಪ್ರಾಯ ಪಟ್ಟಿದ್ದಾರೆ.

