ಬೆಳ್ತಂಗಡಿ: ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಮಂಜೇಶ್ವರ ಮಚ್ಚಂಪಾಡಿ ಕೋಡಿ ಹೌಸ್ನ ಮಹಮ್ಮದ್ ಅಶ್ರಫ್(34) ಮತ್ತು ಮಂಜೇಶ್ವರ, ವರ್ಕಾಡಿ ಗ್ರಾಮದ ಅಬ್ದುಲ್ ಲತೀಪ್(36) ಎನ್ನಲಾಗಿದೆ.
ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಉದಯಗಿರಿ ಎಂಬಲ್ಲಿ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ.ರವರು ಸಿಬ್ಬಂದಿಗಳೊಂದಿಗೆ ರಾತ್ರಿ ಕರ್ತವ್ಯದಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಗುರುವಾಯನಕೆರೆ ಕಡೆಯಿಂದ ನಾರಾವಿ ಕಡೆಗೆ ಮ್ಯಾಕ್ಸಿಮೋ ಗೂಡ್ಸ್ನಲ್ಲಿ ಇಬ್ಬರು ಆರೋಪಿಗಳಾದ ಮಹಮ್ಮದ್ ಅಶ್ರಫ್ ಮತ್ತು ಅಬ್ದುಲ್ ಲತೀಪ್ ಅಕ್ರಮವಾಗಿ ಸಾಗಿಸುತ್ತಿದ್ದ ಗಾಂಜಾವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿಗಳಿಂದ 30,000.ರೂ ಮೌಲ್ಯದ 805.00 ಗ್ರಾಂ ತೂಕದ ಮಾದಕ ಗಾಂಜಾ ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ಅಂದಾಜು ರೂ 2,00,000/- ಮೌಲ್ಯದ ವಾಹನ ಮ್ಯಾಕ್ಸಿಮೋ ಗೂಡ್ಸ್ ತ್ರಿಚಕ್ರ ವಾಹನವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನವಣೆ ಐ.ಪಿ.ಎಸ್ ಹಾಗೂ ಹೆಚ್ಚುವರಿ ಪೊಲೀಸ್ ಆಧೀಕ್ಷಕರಾದ ಡಾ. ಕುಮಾರಚಂದ್ರ ರವರ ನಿರ್ದೇಶನದಂತೆ, ಮಾನ್ಯ ಬಂಟ್ವಾಳ ಡಿ.ವೈಎಸ್.ಪಿ ಪ್ರಥಾಪ್ ಸಿಂಗ್ ತೊರಾಟ್ ರವರ ಸೂಚನೆಯಂತೆ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ. ರವರು ಹಾಗೂ ವೇಣೂರು ಠಾಣಾ ಪಿ.ಎಸ್.ಐ ಸೌಮ್ಯ ಜೆ, ಮತ್ತು ವೃತ್ತ ಕಛೇರಿಯ ಅಪರಾಧ ಪತ್ತೆ ತಂಡದ ಸಿಬ್ಬಂದಿಗಳಾದ ಹೆಚ್ ಸಿ ಇಬ್ರಾಹಿಂ, ಚೌಡಪ್ಪ, ಸುನಿಲ್ ಹಪ್ಪಳ್ಳಿ, ಮತ್ತು ಜೀಪು ಚಾಲಕ ಮಹಮ್ಮದ್ ಅಸೀಫ್, ಲಾರೆನ್ಸ್ ಹಾಗೂ ವೇಣೂರು ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ ವೆಂಕಟೇಶ್ ನಾಯ್ಕ್,ರವೀಂದ್ರ, ಪಂಪಾಪತಿ, ಕೇಶವತಿ, ಶಶಿಕುಮಾರ್, ಶ್ರೀನಿವಾಸ,, ತ್ರಿಮೂರ್ತಿ, ಹನುಮಂತ, ಲತಾರವರು ಭಾಗವಹಿಸಿದ್ದರು .