ಜೀರಿಗೆ ಎಲ್ಲರ ಅಡುಗೆ ಮನೆಯಲ್ಲಿ ಸಿಗುವ ಸಣ್ಣ ಕಾಳು ಎನಿಸದರೂ, ಅದರ ಪ್ರಯೋಜನಗಳು ಮಾತ್ರ ದೊಡ್ಡದೇ. ರೋಗ ನಿರೋಧಕ ಶಕ್ತಿಯಷ್ಟೇ ಅಲ್ಲ, ಹೊಟ್ಟೆ ಸಮಸ್ಯೆ, ಕೂದಲು ಉದುರುವಿಕೆ, ಮುಖದ ಮೊಡವೆ.. ಹೀಗೆ ಸಾಲು ಸಾಲು ಸಮಸ್ಯೆಗಳಿಗೆ ಪರಿಹಾರದ ರೂಪದಲ್ಲಿ ಜೀರಿಗೆಯನ್ನು ಸೇವಿಸಬಹುದು.
ಜೀರಿಗೆಯಲ್ಲಿ ಪೊಟ್ಯಾಸಿಯಮ್ ಮತ್ತು ಕಬ್ಬಿಣಾಂಶ ಹೇರಳವಾಗಿರುತ್ತದೆ. ರಾತ್ರಿ ವೇಳೆ ಜೀರಿಗೆ ನೆನೆಹಾಕಿ, ಬೆಳಗ್ಗೆ ಅದೇ ನೀರಿನಲ್ಲಿ ಮತ್ತಷ್ಟು ನೀರು ಸೇರಿಸಿ ಕುದಿಸಿ ಟೀ ರೀತಿಯಲ್ಲಿ ಕುಡಿದರೆ, ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಜೀರಿಗೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೀರಿಗೆಯಲ್ಲಿ ಮೆಗ್ನೀಷಿಯಮ್, ಕ್ಯಾಲ್ಸಿಯಂ ಸೇರಿ ವಿವಿಧ ಖನಿಜಗಳಿಂದ ಕೂಡಿದೆ. ವಿಟಮಿನ್ ಎ, ಬಿ, ಸಿ ಹೇರಳವಾಗಿರುವುದರಿಂದ ಸೋಂಕು ನಿವಾರಕವಾಗಿಯೂ ಇದು ಕೆಲಸ ಮಾಡುತ್ತದೆ.ಜೀರಿಗೆ ಕುದಿಸಿದ ನೀರಿನಲ್ಲಿ ಥೈಮೋಕ್ವಿನೋನ್ ಎಂಬ ರಾಸಾಯನಿಕ ಸಂಯುಕ್ತ ಬಿಡುಗಡೆ ಆಗಿರುತ್ತದೆ. ಇದು ಯಕೃತ್ತನ್ನು ಉರಿಯೂತದಿಂದ ರಕ್ಷಿಸುತ್ತದೆ ಮತ್ತು ಒಟ್ಟಾರೆ ಯಕೃತ್ತಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಈ ನೀರಿನ ಸೇವನೆಯಿಂದ ಹೊಟ್ಟೆಯ ಇತರೆ ಸಮಸ್ಯೆಗಳೂ ನಿವಾರಣೆ ಆಗುತ್ತದೆ. ಹೊಟ್ಟೆ ನೋವು, ಗ್ಯಾಸ್ಟ್ರಿಕ್, ಹೊಟ್ಟೆ ಮುರಿತ ಈ ಎಲ್ಲ ಸಮಸ್ಯೆಗಳಿಗೂ ರಾಮಬಾಣವಾಗಿರಲಿದೆ.