




ಭಟ್ಕಳ: ಮೀನುಗಾರಿಕೆಯಿಂದ ವಾಪಾಸಾಗುವ ವೇಳೆ ಬೋಟ್ ಮುಳುಗಡೆಗೊಂಡು ಆರು ಮಂದಿ ಮೀನುಗಾರರು ಅಪಾಯದಿಂದ ಪಾರಾದ ಘಟನೆ ಭಟ್ಕಳ ಬಂದರಿನಲ್ಲಿ ನಡೆದಿದೆ. ಈ ದುರಂತದಲ್ಲಿ ಬೋಟ್ ಸೇರಿದಂತೆ ಬಲೆ, ಮೀನುಗಾರಿಕಾ ಸಾಮಗ್ರಿಗಳು ನೀರಿನಲ್ಲಿ ಮುಳುಗಿದ್ದು, ಸುಮಾರು 60 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾಳೆಹಿತ್ತಲಿನ ಸುರೇಶ- ಅಶ್ವಿನಿ ದಂಪತಿಗೆ ಸೇರಿದ ವಿನಾಶ್ ಬೋಟ್ ಇದಾಗಿದೆ. ಭಟ್ಕಳದ ಮಾವಿನ ಕುರುವೆಯ ಉಮೇಶ್ ಮೊಗೇರ ಬೋಟ್ ಚಾಲಕನಾಗಿದ್ದು, ಫೆಬ್ರವರಿ 2ರಂದು ಐದು ಮಂದಿ ಮೀನುಗಾರರನ್ನು ಕರೆದುಕೊಂಡು ಮೀನುಗಾರಿಕೆಗೆ ತೆರಳಿದ್ದರು.
ಫೆಬ್ರವರಿ 5ರಂದು ಬೆಳಿಗ್ಗೆ 3 ಗಂಟೆ ಸುಮಾರಿಗೆ, ಮೀನುಗಾರಿಕೆ ಮುಗಿಸಿ ವಾಪಾಸಾಗುವ ಸಂದರ್ಭ, ಬೋಟ್ ಗೆ ಕಲ್ಲು ತಗುಲಿ ಅದರ ಅಡಿಭಾಗ ಒಡೆದು ನೀರು ನುಗ್ಗಿ ಮುಳುಗಲು ಆರಂಭಿಸಿತು. ಪರಿಸ್ಥಿತಿಯು ಗಂಭೀರವಾಗಿ ಕಾಣುತ್ತಿದ್ದರಿಂದ ಸಮೀಪದಲ್ಲಿದ್ದ ನಾಡದೋಣಿಯ ರಾಮಾ ಮೊಗೇರ ಮತ್ತು ಭರತ್ ಮೊಗೇರ ಧೈರ್ಯದಿಂದ ಮುನ್ನಡೆದು ಐದು ಮಂದಿಯನ್ನೂ ಸುರಕ್ಷಿತವಾಗಿ ರಕ್ಷಿಸಿದರು.
ಈ ಘಟನೆಯಲ್ಲಿ ಬೋಟ್ನ ಜೊತೆಗೆ ಬಲೆ, ಪೋಲೋಕ್, ಡೈನಮ್, ಬ್ಯಾಟರಿ, ಗುಂಡು ಮುಂತಾದ ಮೀನುಗಾರಿಕಾ ಸಾಮಗ್ರಿಗಳು ನಷ್ಟವಾಗಿದ್ದು, ಇದರ ಮೊತ್ತವನ್ನು ಸುಮಾರು 50-60 ಲಕ್ಷ ರೂಪಾಯಿಯಾಗಿ ಅಂದಾಜಿಸಲಾಗಿದೆ ಎಂದು ಬೋಟ್ ಚಾಲಕ ಉಮೇಶ್ ಮೊಗೇರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆ ಭಟ್ಕಳ ಮೀನುಗಾರರ ನಡುವೆ ಆತಂಕವನ್ನು ಸೃಷ್ಟಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲು ಪರಿಶೀಲನೆ ನಡೆಸುತ್ತಿದ್ದಾರೆ.