ಭೋಪಾಲ್: ಭೋಪಾಲ್ನ ಅಶೋಕ ಗಾರ್ಡನ್ ಪ್ರದೇಶದಲ್ಲಿ ಯುವಕನೊಬ್ಬ ಜ್ವರದಿಂದ ಬಳಲುತ್ತಿದ್ದು. ತನಗೆ ಕರೊನಾ ಇರಬಹುದೆಂದು ಆತಂಕಗೊಂಡು ಸೀಮೆಎಣ್ಣೆ ಕುಡಿದು ಬದುಕನ್ನೇ ದುರಂತ ಅಂತ್ಯವಾಗಿಸಿಕೊಂಡ ಘಟನೆ ನಡೆದಿದೆ.
ಕರೊನಾ ಮೇಲಿನ ಭಯಕ್ಕೆ ಕೆಲವರು ಸಾವಿನ ಮನೆಯ ಕದ ತಟ್ಟುತ್ತಿದ್ದಾರೆ. ಹಲವರು ಸೋಂಕು ಹೋಗಿಸಲು ಯಾರು ಏನೇ ಹೇಳಿದರು ಅದನ್ನೆಲ್ಲ ಮಾಡುತ್ತಿದ್ದಾರೆ. ಇಲ್ಲೂ ಇದೇ ಆಗಿದ್ದು, ಜ್ವರದಿಂದ ಬಳಲುತ್ತಿದ್ದ ಮಹೇಂದ್ರ (30) ಗೆ ಸೀಮೆಎಣ್ಣೆ ಕುಡಿದರೆ ಕರೊನಾ ಗುಣಮುಖವಾಗುತ್ತೆ ಎಂದು ಈತನ ಸ್ನೇಹಿತ ಹೇಳಿದ್ದನು. ಅದನ್ನೇ ನಂಬಿ ಮಹೇಂದ್ರ ಮೇ 12ರಂದು ಸೀಮೆಎಣ್ಣೆ ಕುಡಿದಿದ್ದ.
ಇದಾದ ಬಳಿಕ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಕೂಡಲೇ ಕುಟುಂಬಸ್ಥರು ಮಹೇಂದ್ರನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಈತ ಬದುಕಲೇ ಇಲ್ಲ. ಸಾವು-ಬದುಕಿನ ನಡುವೆ 4 ದಿನ ಹೋರಾಡಿ ಕೊನೆಯುಸಿರೆಳೆದ. ವಿಪರ್ಯಾಸ ಅಂದ್ರೆ ಮಹೇಂದ್ರನಿಗೆ ಕರೊನಾ ಸೋಂಕು ಇರಲಿಲ್ಲ. ಕರೊನಾ ವರದಿ ನೆಗೆಟಿವ್ ಬಂದಿತ್ತು. ವರದಿ ಬರುವ ಮುನ್ನವೇ ಸೀಮೆಎಣ್ಣೆ ಕುಡಿದು ದುರಂತ ಅಂತ್ಯಕಂಡಿದ್ದಾನೆ.