ಆಧುನಿಕ ಜಗತ್ತು ಎಷ್ಟೇ ಬೆಳೆದರೂ ಒಂದು ಹನಿ ರಕ್ತವನ್ನು ಕೂಡಾ ಉತ್ಪಾದಿಸಲು ಇದುವರೆಗೂ ಯಾವುದೇ ಕಾರ್ಪೊರೇಟ್ ಕಂಪನಿಗಳಿಗೆ ಸಾಧ್ಯವಾಗಿಲ್ಲ- ಅಸ್ಮಾ ಹಸೈನಾರ್


ವಿಟ್ಲ : ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ, ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಸೆರ್ಕಳ ಇದರ ನೇತೃತ್ವದಲ್ಲಿ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸೆರ್ಕಳ ಪ್ರಾಥಮಿಕ ಶಾಲೆಯಲ್ಲಿ ಇಂದು ರಕ್ತದಾನ ಶಿಬಿರ ನಡೆಯಿತು.


SDMC ಅಧ್ಯಕ್ಷರಾದ ಅಶ್ರಪ್ ಸೆರ್ಕಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಸ್ಮಾ ಹಸೈನಾರ್ ಮಾತನಾಡುತ್ತಾ ಈ ಆಧುನಿಕ ಜಗತ್ತು ಎಷ್ಟೇ ಬೆಳೆದರೂ ಕೂಡಾ ವಿಶ್ವದಲ್ಲಿ ಒಂದೇ ಒಂದು ಹನಿ ರಕ್ತ ಉತ್ಪಾದಿಸಲು ಇದುವರೆಗೂ ಸಾಧ್ಯವಾಗಿಲ್ಲ. ರಕ್ತವು ಮಾನವನ ದೇಹದಲ್ಲಿ ಉತ್ಪಾದನೆಯಾಗುವ ಒಂದು ಸಹಜ ಕ್ರಿಯೆಯಾಗಿದೆ.ಆಯಾ ಸಂದರ್ಭಗಳಲ್ಲಿ ರಕ್ತವನ್ನು ಒಬ್ಬರಿಂದ ಒಬ್ಬರಿಗೆ ನೀಡುವ ಹೊರತು ಯಾವುದೇ ಪರ್ಯಾಯ ಮಾರ್ಗವಿಲ್ಲ. ರಕ್ತದಾನ ಮತ್ತು ನೇತ್ರದಾನ ಜಗತ್ತಿನ ಶ್ರೇಷ್ಠ ದಾನಗಳಲ್ಲೊಂದಾಗಿದೆ. ರಕ್ತ ಸ್ವತಃ ನೀಡುವುದರಿಂದ ನಮ್ಮ ಶರೀರಕ್ಕೂ ಬಹಳ ಪ್ರಯೋಜನಗಳಿವೆ ಎಂದು ತಿಳಿಸಿದರು. ಅಲ್ಲದೆ ಶಾಲಾಭಿವೃದ್ದಿ ಸಮಿತಿಯವರು ಶಿಕ್ಷಣವನ್ನು ಪ್ರೋತ್ಸಾಹಿಸುವುದರೊಂದಿಗೆ ಸಾಮಾಜಿಕ, ಆರೋಗ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಇಲ್ಲಿನ ಕ್ರಿಯಾಶೀಲ ಅಧ್ಯಕ್ಷರಾದ ಅಶ್ರಪ್ ಸೆರ್ಕಳ ಇತರರಿಗೆ ಮಾದರಿಯಾಗಿದ್ದಾರೆ. ರಕ್ತಗಳಲ್ಲಿ ಯಾವುದೇ ಧರ್ಮ, ಜಾತಿ-ಮತ,ಬಡವ-ಬಲ್ಲಿದನೆಂಬ ಬೇದವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ವ್ಯಾಪಾರೀಕರಣದ ಮನಸ್ಥಿತಿಯ ಕಾರ್ಪೊರೇಟ್ ಆಸ್ಪತ್ರೆಗಳ ಹಾವಳಿಯಿಂದಾಗಿ ಎಲ್ಲವೂ ದಂಧೆಯಾಗಿದೆ. ಸಮಾಜಸೇವೆಯ ಸೋಗಿನಲ್ಲಿ ಉಸಿರಾಡುತ್ತಿರುವ ಕೆಲವು ಹಣದಾಹಿ ಸಂಘ-ಸಂಸ್ಥೆಗಳು ಇವರೊಂದಿಗೆ ಕೈಜೋಡಿಸಿದ ಉದಾಹರಣೆಗಳು ಸಾಕಷ್ಟಿವೆ. ಇಂತಹ ಸಂಘ-ಸಂಸ್ಥೆಗಳು ಸಮಾಜಸೇವೆಯ ನೆಪದಲ್ಲಿ ರಕ್ತದಾನ, ಉಚಿತ ಆರೋಗ್ಯ ಸೇವೆ ಎಂಬ ಮುದ್ದಾದ ಹೆಸರಿನೊಂದಿಗೆ ವ್ಯಾಪಾರೀಕರಣ ಮಾಡುವುದು ಸಮಾಜಕ್ಕೆ ಮಾರಕವಾಗಿದೆ. ಶಾಲಾ ಮೇಲುಸ್ತುವಾರಿ ಸಮಿತಿಯವರು ಜಿಲ್ಲಾ ಆಸ್ಪತ್ರೆಗಳಲ್ಲಿ ರಕ್ತದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ರಕ್ತದಾನ ಏರ್ಪಡಿಸುವ ಕಾರ್ಯಕ್ರಮ ಹಮ್ಮಿಕೊಂಡು ಕೈಗೊಂಡ ತೀರ್ಮಾನ ಒಳ್ಳೆಯ ಬೆಳೆವಣಿಗೆಯಾಗಿದೆ ಎಂದು ತಿಳಿಸುತ್ತಾ, ಶಿಬಿರಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.
ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಂ.ಎಸ್ ಮಹಮ್ಮದ್ ಮಾತನಾಡುತ್ತಾ, ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರ ಶಿಕ್ಷಣ ಪ್ರೋತ್ಸಾಹದೊಂದಿಗೆ ಸಾಮಾಜಿಕ ಆರೋಗ್ಯಕ್ಷೇತ್ರದ ಅವರ ಕಾಳಜಿಯ ಕರೆಗೆ ಬಂದಿದ್ದೇನೆ ಮತ್ತು ರಕ್ತದಾನದ ಮಹತ್ವ ತಿಳಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು..
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ. ಬಿ.ರಮನಾಥ ರೈ ದ.ಕ.ಜಿ.ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ.ಎಸ್.ಮಹಮ್ಮದ್, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಕೊಳ್ನಾಡು ಗ್ರಾ.ಪಂಚಾಯತ್ ಅಧ್ಯಕ್ಷರಾದ ಅಶ್ರಪ್ ಕೆ.ಸಾಲೆತ್ತೂರು ಕಾರ್ಯಕ್ರಮಕ್ಕೆ ಶುಭಕೋರಿದರು.
ಈ ಶಾಲಾಭಿವೃದ್ದಿ ಸಮಿತಿಯ ಕಾರ್ಯಕ್ರಮದ ವೇದಿಕೆಯಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ, ಸ್ಥಳೀಯ ಸದಸ್ಯರಾದ ನೆಬಿಸಾ ಖಾದರ್, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಹಮೀದ್ ಸುರಿಬೈಲ್, ಜಯಂತಿ ಜನಾರ್ದನ ಗೌಡ ಸೆರ್ಕಳ, ಶಾಲಾಭಿವೃದ್ದಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು