

ವಿಟ್ಲ ಸಮೀಪದ ಬೊಳಂತಿಮುಗೇರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರು ತಾನು ಸೇವೆ ಸಲ್ಲಿಸಿದ ಶಾಲೆಗೆ ಕೊಳವೆ ಬಾವಿ ಕೊಡುಗೆ ನೀಡುವ ಮೂಲಕ ನೀರಿನ ಸಮಸ್ಯೆ ನೀಗಿಸಿ ಮಾದರಿ ಶಿಕ್ಷಕರಾಗಿದ್ದಾರೆ.
ವಿಟ್ಲ ಕಸಬಾ ಗ್ರಾಮದ ಬೊಳಂತಿಮುಗೇರು ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ರಾಮಣ್ಣ ಗೌಡರು ವಿಶಿಷ್ಟವಾದ ಸೇವೆ ನೀಡಿದ್ದಾರೆ. ಬೊಳಂತಿಮುಗೇರು ಸರ್ಕಾರಿ ಪ್ರೌಢಶಾಲೆಗೆ ಬರುವ ಮುನ್ನ ಕೇಪು-ಕಲ್ಲಂಗಳ ಪ್ರೌಢಶಾಲೆಯಲ್ಲಿ ರಾಮಣ್ಣ ಗೌಡರು ಸುಮಾರು ಹದಿನಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲಿಂದ ವರ್ಗಾವಣೆಯಾಗಿ ಬೊಳಂತಿಮುಗೇರು ಶಾಲೆಗೆ ಬಂದು ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ರಾಮಣ್ಣ ಗೌಡರು ಇದೇ ಜುಲೈ ತಿಂಗಳಲ್ಲಿ ನಿವೃತ್ತಿ ಜೀವನಕ್ಕೆ ಕಾಲಿಡಲಿದ್ದಾರೆ.
ಕೊಳವೆ ಬಾವಿ ಕೊಡುಗೆ ನೀಡಿದ ರಾಮಣ್ಣ ಗೌಡರು ಪ್ರತಿಕ್ರಿಯೆ ಜೊತೆ ತನ್ನ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಬೊಳಂತಿಮುಗೇರು ಶಾಲೆ ಹಾಗೂ ಅಲ್ಲೇ ಪಕ್ಕದ ಪ್ರೈಮರಿ ಶಾಲೆಗೆ ಈವರೆಗೂ ಒಂದೇ ಕೊಳವೆ ಬಾವಿ ಇದೆ. ಅದರಲ್ಲಿ ನೀರಿನ ಅಭಾವ ಕಂಡುಬಂದ ಕಾರಣ ನೂರು ವಿದ್ಯಾರ್ಥಿಗಳನ್ನು ಹೊಂದಿರುವ ನಮ್ಮ ಶಾಲೆಯಲ್ಲಿ ನೀರಿನ ಸಮಸ್ಯೆ ತಲೆದೋರಿತ್ತು. ನಾನು ಜುಲೈನಲ್ಲಿ ನಿವೃತ್ತಿಯಾಗಲಿದ್ದು ಈವರೆಗೆ ಸೇವೆ ನೀಡಿದ ಸಂಸ್ಥೆಗೆ ಏನಾದರೊಂದು ಕೊಡುಗೆ ನೀಡಬೇಕೆಂದು ಯೋಚಿಸಿದ್ದೆನು. ಆ ಸಂದರ್ಭ ಮುಖ್ಯ ಶಿಕ್ಷಕರು ನೀರಿನ ಸಮಸ್ಯೆ ಬಗ್ಗೆ ಹೇಳಿದ್ದರು. ಅದಕ್ಕಾಗಿ ಕೊಳವೆ ಬಾವಿಯ ಕೊಡುಗೆ ನೀಡಿದ್ದು ನನ್ನ ಸೇವಾ ಕಾರ್ಯಕ್ಕೆ ಪರಮಾತ್ಮನೂ ಆಶೀರ್ವಾದ ನೀಡಿದ ಕೊಳವೆ ಬಾವಿಯಲ್ಲಿ ನಿರೀಕ್ಷೆಗೂ ಮೀರಿ ನೀರು ದೊರಕಿದೆ. ನನ್ನ ಸೇವೆಯಲ್ಲಿ ನನಗೆ ಸಂಪೂರ್ಣ ತೃಪ್ತಿ ಸಿಕ್ಕಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ರಾಮಣ್ಣ ಗೌಡರ ವಿಶಿಷ್ಟ ಸೇವಾ ಕಾರ್ಯಕ್ಕೆ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಶಿಕ್ಷಕ -ರಕ್ಷಕ ಸಂಘದವರು ಹಾಗೂ ಶಿಕ್ಷಣ ಪ್ರೇಮಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.