ವಿಟ್ಲ: ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಟ್ಲದಲ್ಲಿ ವಿಜಯೋತ್ಸವ, ಅಭಿನಂದನಾ ಸಭೆ ಆಯೋಜಿಸಲಾಗಿತ್ತು. ಅಶೋಕ್ ಕುಮಾರ್ ರೈ ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಸಂಭ್ರಮಿಸಿದರು. ಈ ವೇಳೆ ಬಾಲಕರಿಬ್ಬರು ನೂತನ ಶಾಸಕ ಅಶೋಕ್ ಕುಮಾರ್ ರೈ ಅವರ ಕೈ ಪತ್ರವೊಂದನ್ನು ನೀಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಸಮಾರಂಭಕ್ಕೆ ಮೊದಲು ವಿಜಯೋತ್ಸವ ಮೆರವಣಿಗೆ ನಡೆದಿತ್ತು. ಅಶೋಕ್ ಕುಮಾರ್ ರೈ ಅವರು ಜೀಪಿನಿಂದ ಇಳಿಯುವುದನ್ನೇ ಕಾಯುತ್ತಿದ್ದ ಬಾಲಕರಿಬ್ಬರು ನೇರವಾಗಿ ಅಶೋಕ್ ಕುಮಾರ್ ರೈ ಅವರ ಬಳಿಗೆ ಓಡೋಡಿ ಬಂದು ಕೈಗೆ ಚೀಟಿಯೊಂದನ್ನು ನೀಡಿದರು.
ಅಶೋಕ್ ರೈ ಆ ಪತ್ರವನ್ನು ತದೇಕಚಿತ್ತದಿಂದ ಓದತೊಡಗಿದರು. ಗಡಿಬಿಡಿಯ ನಡುವೆಯೂ ಮುಖದಲ್ಲಿ ನಗು ಅರಳಿತು. ಮಕ್ಕಳ ಸಂತೋಷದಲ್ಲಿ ತಾವು ಪಾಲ್ಗೊಂಡರು. ಶಾಸಕರು ಮಕ್ಕಳ ಸಂತೋಷ ನೋಡಿ, ಮನತುಂಬಿ ಹರಸಿದರು. ಮಾತ್ರವಲ್ಲ, ತಮ್ಮ ಕಿಸೆಗೆ ಕೈ ಹಾಕಿ, ಕೈಗೆ ಸಿಕ್ಕ ನೋಟನ್ನು ಬಾಲಕರಿಗೆ ನೀಡಿದರು.
ಮಕ್ಕಳು ಬರೆದ ಪತ್ರದ ಸಾಲುಗಳು ಹೀಗಿತ್ತು…
ಕರ್ನಾಟಕ, ವಿಧಾನಸಭಾ ಚುನಾವಣೆ ಪುತ್ತೂರು ವಿಧಾನಸಭಾ ಕ್ಷೇತ್ರ
ನಮ್ಮ ಊರಿನ ನೆಚ್ಚಿನ MLA ಆಗಿರುವ ಪ್ರಿಯ ಅಶೋಕ್ ಕುಮಾರ್ ರೈ ಅವರಿಗೆ ನಮಸ್ಕಾರ.
ನೀವು ಚಂದಳಿಕೆ ಭಾರತ್ ಅಡಿಟೋರಿಯಂಗೆ ಸಂದರ್ಶಿಸಿದಾಗ ನಾನು ನಿಮ್ಮ ಕೈ ಹಿಡಿದು ಹೇಳಿದ್ದೆ. ನೀವು ಈ ಸಲ ಗೆಲ್ಲುತ್ತೀರಿ ಎಂದಾಗ ನೀವು (ತುಳು ಭಾಷೆಯಲ್ಲಿ) ಎಡ್ಡೆ ಬಾಳೆ ಎಂದು ಹೇಳಿದ್ದೀರಿ. ಇನ್ನು ಮುಂದಕ್ಕೂ ನೀವು ಪ್ರಧಾನ ಮಂತ್ರಿಯಾಗಬೇಕು ಎಂದೂ ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತೇವೆ.
- ಶಾಹುಲ್ ಹಮೀದ್ 2ನೇ ತರಗತಿ,
ಚಂದಳಿಕೆ ಶಾಲೆ