ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪೂರ್ವಾಹ್ನ 11 ಗಂಟೆಗೆ 2021–22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಕೊರೊನಾದಿಂದ ಬಸವಳಿದಿರುವ ದೇಶದ ಆರ್ಥಿಕತೆಗೆ ಈ ಬಜೆಟ್ ಪುನಶ್ಷೇತನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಈಗಾಗಲೆ ಸಚಿವೆ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವಾಲಯಕ್ಕೆ ಆಗಮಿಸಿದ್ದಾರೆ.

ಕೊರೊನಾ ಹಿನ್ನಲೆಯಲ್ಲಿ ಎಂದಿನ ಸಂಪ್ರದಾಯವನ್ನು ಮುರಿದು ಈ ಬಾರಿ ಕಾಗದ ರಹಿತ ಬಜೆಟ್ ಮಂಡನೆಯಾಗಲಿದೆ. ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಎರಡನೇ ಅವಧಿಯ ಮೂರನೆ ಬಜೆಟ್ ಇದಾಗಲಿದೆ. ಅಲ್ಲದೆ, ಹಣಕಾಸು ಸಚಿವೆಯಾಗಿ ಇದು ನಿರ್ಮಲಾ ಸೀತಾರಾಮ್ ಮಂಡಿಸುವ ಮೂರನೆ ಬಜೆಟ್ ಆಗಿದೆ.

ಕೊರೊನಾ ನಂತರ ಮಂಡನೆಯಾಗುತ್ತಿರುವ ಮೊದಲ ಬಜೆಟ್ ಇದಾಗಿದ್ದರಿಂದ ಕೊರೊನಾದಿಂದ ಕುಸಿತಕ್ಕೊಳಗಾದ ಕ್ಷೇತ್ರಗಳ ಮೇಲೆ ಗಮನ ಹರಿಸಲಾಗುತ್ತದೆ ಎನ್ನಲಾಗಿದೆ. ಅಲ್ಲದೆ ಕೃಷಿ ಕಾನೂನಿನ ವಿರುದ್ದ ದೆಹಲಿಯ ಗಡಿಗಳಲ್ಲಿ ರೈತರು ಹೋರಾಟ ಮಾಡುತ್ತಿರುವುದರಿಂದ ರೈತರನ್ನು ಕೂಡಾ ಈ ಬಜೆಟ್ ಕೇಂದ್ರೀಕರಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ನಡುವೆ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು, ದೆಹಲಿ ಗಡಿಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ರೈತರು ಬ್ಯಾರಿಕೇಡ್ಗಳನ್ನು ದಾಟಿ ಬರದಂತೆ ತಡೆಯಲು ಪ್ರತಿಭಟನಾ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಬಜೆಟ್ ಜನರ ನಿರೀಕ್ಷೆಗೆ ಅನುಗುಣವಾಗಿರುತ್ತದೆ ಎಂದಿದ್ದಾರೆ. “ಸಬ್ ಕಾ ಸಾಥ್, ಸಬ್ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಘೋಷವಾಕ್ಯದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರವು ‘ಆತ್ಮನಿರ್ಭರ ಭಾರತ’ ಪ್ಯಾಕೇಜ್ ಘೋಷಿಸುವ ಮೂಲಕ ದೇಶಕ್ಕೆ ಆರ್ಥಿಕತೆಗೆ ಹೊಸ ದಿಕ್ಕು ನೀಡಿದೆ. ಈ ಬಜೆಟ್ ಕೊರೊನಾದಿಂದ ದೇಶವನ್ನು ರಕ್ಷಿಸುತ್ತದೆ ಮತ್ತು ಆರ್ಥಿಕತೆಯನ್ನು ಆದಷ್ಟು ಬೇಗನೆ ಸರಿ ದಾರಿಗೆ ತರುತ್ತದೆ” ಎಂದು ಹೇಳಿದ್ದಾರೆ.

