ಸಕಲೇಶಪುರ ಪಟ್ಟಣದಲ್ಲಿ ಶನಿವಾರ ರಾತ್ರಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಸ್ಕಾರ್ಪಿಯೋ ಕಾರನ್ನು ಸಿನಿಮಾ ಸ್ಟೈಲಲ್ಲಿ ಬೆನ್ನಟ್ಟಿ ತಡೆಯಲಾಗಿದೆ. ಬಜರಂಗ ದಳದ ಕಾರ್ಯಕರ್ತರ ಈ ಕಾರ್ಯಾಚರಣೆ ವೇಳೆ ಭಾರಿ ಪ್ರಮಾಣದ ಗೋಮಾಂಸ ವಶಕ್ಕೆ ಪಡೆಯಲಾಗಿದೆ.
ಶನಿವಾರ ರಾತ್ರಿ ಸಕಲೇಶಪುರ ಪಟ್ಟಣದ ಮೂಲಕ ಸ್ಕಾರ್ಪಿಯೋ ಕಾರಿನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ಬಜರಂಗ ದಳದ ಯುವಕರಿಗೆ ಮಾಹಿತಿ ಸಿಕ್ಕಿತ್ತು.

ಕೂಡಲೇ ಒಟ್ಟಾದ ಅವರು ಗುರುತಿಸಲಾದ ಕಾರನ್ನು ತಡೆಯಲು ಮುಂದಾದರು. ಆಲೂರು ಕಡೆಯಿಂದ ಸಕಲೇಶಪುರಕ್ಕೆ ಕಡೆ ತೆರಳುತ್ತಿದ್ದ ಕಾರನ್ನು ತಡೆಯಲು ಪ್ರಯತ್ನಿಸಿದರೂ ನಿಲ್ಲದೆ ಇದ್ದಾಗ ಬೇರೆ ವಾಹನಗಳಲ್ಲಿ ಬೆನ್ನಟ್ಟಿದರು. ಆದರೆ, ಅಷ್ಟು ಹೊತ್ತಿಗೆ ಆರೋಪಿಗಳು ಕಾರನ್ನು ನಿಲ್ಲಿಸಿ ಪರಾರಿಯಾಗಿದ್ದರು. ಕಾರನ್ನು ಪರಿಶೀಲನೆ ನಡೆಸಿದಾಗ ಸುಮಾರು ೬೦೦ ಕೆಜಿಯಷ್ಟು ಗೋಮಾಂಸ ಪತ್ತೆಯಾಗಿದೆ.
ಬಜರಂಗ ದಳ ಕಾರ್ಯಕರ್ತರು ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಭಾರಿ ಪ್ರಮಾಣದಲ್ಲಿದ್ದ ಗೋಮಾಂಸವನ್ನು ಕೂಡಾ ವಶಕ್ಕೆ ಪಡೆದಿದ್ದಾರೆ. ಕಾರನ್ನು ಟೋ ಮಾಡಿ ತೆಗೆದುಕೊಂಡು ಹೋಗಿ ಠಾಣೆಯಲ್ಲಿ ಇರಿಸಲಾಗಿದೆ. ಪರಾರಿಯಾದ ಆರೋಪಿ ಅಥವಾ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಕಾರಿನ ಮಾಲೀಕರು ಬಂದೇ ಬರುತ್ತಾರೆ ಎಂಬ ಕಾರಣಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ.

