ಲವ್ ಜಿಹಾದ್ ಕುರಿತು ಹೊಸ ವಿವಾದವನ್ನು ಹುಟ್ಟುಹಾಕಿರುವ ಬಲಪಂಥೀಯ ಧರ್ಮ ಸೇನಾ ಸಂಘಟನೆಯು ಮಧ್ಯಪ್ರದೇಶದ ಜಬಲ್ಪುರದಲ್ಲಿ ಹೊಸದೊಂದು ಘೋಷಣೆ ಮಾಡಿದೆ. ಹಿಂದೂ ಹುಡುಗಿಯರ ಸಂಖ್ಯೆ ಕಡಿಮೆಯಾಗುತ್ತಿರುವುದರ ಹಿಂದೆ ಲವ್ ಜಿಹಾದ್ ಕಾರಣವೆಂದು ಹಿಂದೂ ಧರ್ಮ ಸೇನಾ ಸಂಘಟನೆಯು ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ 11,000 ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ.
ಈ ಕುರಿತು ಮಾತನಾಡಿರುವ ಧರ್ಮಸೇನಾ ಸಂಸ್ಥಾಪಕ ಹಾಗೂ ಮುಖ್ಯಸ್ಥ ಯೋಗೇಶ್ ಅಗರ್ವಾಲ್, ಮುಸ್ಲಿಂ ಸಂಘಟನೆಗಳು ಲವ್ ಜಿಹಾದ್ ನಡೆಸುತ್ತಿರುವ ರೀತಿಯಲ್ಲಿ ಹಿಂದೂಗಳು ಮುಂದೆ ಬಂದು ಮುಸ್ಲಿಂ ಹುಡುಗಿಯರನ್ನು ಮದುವೆಯಾಗಲು ತಮ್ಮ ಹುಡುಗರನ್ನು ಪ್ರೋತ್ಸಾಹಿಸಬೇಕು ಎಂದಿದ್ದಾರೆ. ಈ ಕ್ರಮವು ಹೆಣ್ಣುಮಕ್ಕಳ ಜನಸಂಖ್ಯೆಯನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸುತ್ತದೆ ಎಂದು ಅಗರ್ವಾಲ್ ಹೇಳಿದ್ದಾರೆ. ಮತಾಂತರದಿಂದ ಹಿಂದೂ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿರುವ ಯಾವುದೇ ಹಿಂದೂ ಯುವಕ ಆಕೆಯನ್ನು ಮದುವೆಯಾಗಲು ನಿರ್ಧರಿಸಿದರೆ, ಧರ್ಮಸೇನೆಯು ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತದೆ ಮತ್ತು 11,000 ರೂ ನಗದು ಬಹುಮಾನವನ್ನು ನೀಡುತ್ತದೆ.ಈಗ ನಾವು ನಮ್ಮ ಹೆಣ್ಣುಮಕ್ಕಳನ್ನು ಉಳಿಸುವ ಸಮಯ ಬಂದಿದೆ. ಹಿಂದೂ ಕುಟುಂಬಗಳಲ್ಲಿ ಮುಸ್ಲಿಂ ಹುಡುಗಿಯರನ್ನೂ ಸ್ವೀಕರಿಸುತ್ತೇವೆ” ಎಂದಿದ್ದಾರೆ.
200 ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರನ್ನು ಹೊಂದಿರುವ ಜಬಲ್ಪುರದಲ್ಲಿ ಧರ್ಮ ಸೇನೆಯು ಹಳೆಯ ಹಿಂದೂ ಸಂಘಟನೆಯಾಗಿದೆ. ಈ ಸಂಘಟನೆಯು ಮೊದಲು ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿತ್ತು, ಆದರೆ ನಂತರ ಎರಡರೊಂದಿಗಿನ ಸಂಬಂಧವನ್ನು ಕಡಿದುಕೊಂಡಿದೆ.