ಬೆಳಗಾವಿ: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದ್ದು, ಸಂತ್ರಸ್ತೆಯ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮಾರ್ಚ್ 2 ರಿಂದ ಮಗಳು ಅಪಹರಣವಾಗಿದ್ದಾಳೆ ಎಂದು ಯುವತಿಯ ಪೋಷಕರು ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಮ್ಮ ಮಗಳು ಅಪಹರಣವಾಗಿದ್ದಾಳೆ . ನಕಲಿ ಸಿಡಿ ಮಾಡಿ ತೇಜೋವಧೆ ಮಾಡಿದ್ದಾರೆಂದು ಪೋಷಕರು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಸಿಡಿ ಪ್ರಕರಣ ಬೆಳಕಿಗೆ ಬಂದ 12 ದಿನಗಳ ಬಳಿಕ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಯುವತಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಳು.

ಗೃಹ ಸಚಿವರು ಯುವತಿಗೆ ಅಗತ್ಯ ರಕ್ಷಣೆ ನೀಡುವಂತೆ ಸೂಚಿಸಿದ ಬೆನ್ನಲ್ಲೇ ಕಾರ್ಯ ಪ್ರವೃತ್ತರಾಗಿದ್ದ ಪೊಲೀಸರು, ಯುವತಿಯ ಪೋಷಕರ ನಿವಾಸ ಎದುರು ನೋಟಿಸ್ ಅಂಟಿಸಿ, ದೂರವಾಣಿ ಅಥವಾ ಇ-ಮೇಲ್ ಮೂಲಕ ಸಂಪರ್ಕ ಮಾಡುವಂತೆ ತಿಳಿಸಿದ್ದರು. ಆದರೆ ಯುವತಿ ಮಾತ್ರ ರಕ್ಷಣೆ ಪಡೆದುಕೊಳ್ಳಲು ಪೊಲೀಸರನ್ನು ಸಂಪರ್ಕ ಮಾಡಿರಲಿಲ್ಲ.

ಇದರ ನಡುವೆಯೇ ಪೋಷಕರು ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

