ವಿಟ್ಲ: ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಡಡ್ಕ ಸಮೀಪದ ಮರುವಾಳ ಎಂಬಲ್ಲಿ ಬೀಡಿ ಕೊಟ್ಟು ಮನೆಗೆ ಬರುತ್ತಿದ್ದ ಮಹಿಳೆಯೋರ್ವರ ಚಿನ್ನದ ಸರ ಕಳ್ಳತನ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಲ್ಲಿ ಯಶಸ್ವಿಯಾಗಿರುವ ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡವನ್ನು ಸೆ.೩೦ರಂದು ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ವಿಟ್ಲ ಪೊಲೀಸ್ ಠಾಣಾ ಎಸ್.ಐ ವಿನೋದ್ ರೆಡ್ಡಿಯವರು ಮಾತನಾಡಿ ನಾವು ನಮ್ಮ ಕರ್ತವ್ಯವನ್ನಷ್ಟೆ ಮಾಡಿದ್ದೇವೆ. ಅಭಿನಂದನೆಯ ಅವಶ್ಯಕತೆ ಇಲ್ಲ, ನಮ್ಮನ್ನು ನೇಮಿಸಿರುವುದೇ ಅದೇ ಉದ್ದೇಶಕ್ಕೆ ನಿಮಗೆ ಖುಷಿಯಾಗುತ್ತೆ, ಇದರಿಂದ ಸಮಾಜಕ್ಕೂ ಒಂದು ಉತ್ತಮ ಸಂದೇಶ ರವಾನೆಯಾಗುತ್ತದೆ ಎನ್ನುವಾ ಒಂದೇ ಒಂದು ಉದ್ದೇಶದಿಂದ ನಾವಿಲ್ಲಿಗೆ ಬಂದಿದ್ದೇವೆ.
ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿ ಒಂದು ಶಾಂತ ರೀತಿಯಲ್ಲಿ ಇರುವ ಪ್ರದೇಶ ಎನ್ನುವುದು ನಮ್ಮ ಪೊಲೀಸ್ ರೆಕಾರ್ಡ್ ನಲ್ಲೇ ಇದೆ. ಇಂತಹ ಸಂದರ್ಭದಲ್ಲಿ ಎಲ್ಲಿಂದಲೋ ಬಂದವರು ಇಲ್ಲಿ ಬಂದು ಈ ರೀತಿ ಮಾಡಿದ್ದಾರೆ ಎಂದರೆ ನಿಮಗೆ ಮಾತ್ರವಲ್ಲ, ನಮ್ಮ ಘನತೆಗೂ ದಕ್ಕೆಯಾಗುವಂತಹ ಒಂದು ಸನ್ನಿವೇಶವಾಗಿದೆ. ನಮ್ಮ ವ್ಯಾಪ್ತಿಯಲ್ಲಿ ಇಂತಹ ಒಂದು ಘಟನೆ ನಡೆದಿದೆ ಎಂದಾಗ, ನನ್ನಕ್ಕಿಂತ ಅಧಿಕ ಕೆಲಸ ಮಾಡಿದವರು ನಮ್ಮ ತಂಡ, ನಾನು ಕೇವಲ ಮುಖಪುಟ ಮಾತ್ರ. ನಮ್ಮ ತಂಡ ಘಟನೆ ನಡೆದ ಕ್ಷಣದಿಂದ ಹಿಡಿದು ರಾತ್ರಿ ಹಗಲೆನ್ನದೆ ಕೆಲಸ ಮಾಡಿದ್ದಾರೆ. ಅಂದರೆ ಸರಿಸುಮಾರು ಮೂವತ್ತು ಗಂಟೆಗಳ ಕಾಲ ನಿರಂತರವಾಗಿ ಕೆಲಸಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಮ್ಮ ಕಣ್ಣಮುಂದೆ ಅನುಮಾನಾಸ್ಪದವಾಗಿ ಕೆಲ ವ್ಯಕ್ತಿಗಳು ತಿರುಗಾಡುತ್ತಿರುತ್ತಾರೆ. ನಮ್ಮ ಕಣ್ಣಮುಂದೆಯೇ ಕೆಲವೊಂದು ಘಟನೆಗಳು ನಡೆಯುತ್ತಿರುತ್ತದೆ. ನಮ್ಮ ಮನೆ ಹುಡುಗರೇ ಅಥವಾ ಹೊರಗಿನವರು ಗಾಂಜಾ ಸೇದಬಹುದು, ಕೆಲವೊಮ್ಮೆ ಕುಡಿದು ಚೀರಾಡುತ್ತಿರಬಹುದು. ಆಗ ನೀವೇನು ಭಾವಿಸುತ್ತೀರಿ ನಮಗ್ಯಾಕಪ್ಪಾ ಎಂದು ಸುಮ್ಮನಿರುತ್ತೀರಿ. ಅದನ್ನು ಮಾಡಬೇಡಿ ನೀವು ಮೌನ ಮುರಿದು ಮಾತನಾಡಿ ಅವರಿಗೆ ತಿಳಿ ಹೇಳುವ ಕೆಲಸ ಮಾಡಿ.
ಯಾವುದೋ ಹುಡುಗ ಹೆಲ್ಮೇಟ್ ಹಾಕದೆ ಬೈಕ್ ಚಲಾಯಿಸುತ್ತಿದ್ದರೆ ಅದು ಕೂಡ ಅಪರಾದವೇ. ಕೇವಲ ಗಾಂಜ ಸೇದಿದ ಮಾತ್ರಕ್ಕೆ, ಡ್ರಿಂಕ್ಸ್ ಮಾಡಿದರೆ ಮಾತ್ರ ಅಪರಾಧವಲ್ಲ. ನಾವೆಲ್ಲರೂ ಈಗ ಕೊರೋನದಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸುತ್ತೇವೆ. ಇತರ ಕಡೆಗಳಿಗೆ ಹೋಲಿಕೆ ಮಾಡಿದರೆ ವಿಟ್ಲ ಭಾಗದಲ್ಲಿ ಕೊರೋನದಿಂದ ಸಾವಾಗಿಲ್ಲ. ಅಪಘಾತ ಸಂಭವಿಸುವ ವೇಳೆ ಹೆಲ್ಮೇಟ್ ಧರಿಸದೆ ಇದ್ದುದರಿಂದಾಗಿ ಈ ವರ್ಷ ೬ಜನ ಮೃತಪಟ್ಟಿದ್ದಾರೆ. ಈಗ ನೀವೆ ಯೋಚನೆ ಮಾಡಿ, ಹೆಲ್ಮೇಟ್ ರಹಿತ ಚಾಲನೆ ಅದು ಅಪಾಯವೇ, ಸೀಟ್ ಬೆಲ್ಟ್ ದರಿಸದೆ ಡ್ರೈವಿಂಗ್ ಮಾಡ್ತಿವಲ್ಲಾ ಅದು ಕೂಡಾ ಅಪಾಯವೇ. ಇದನ್ನೆಲ್ಲಾ ನಿಮ್ಮ ಮಕ್ಕಳಿಗೆ, ನಿಮ್ಮ ಮನೆಯ ಪಕ್ಕದ ಮಕ್ಕಳಿಗೆ ತಿಳಿಹೇಳುವ ಕೆಲಸ ನಿಮ್ಮಂತ ಹಿರಿಯರಿಂದ ಆಗಬೇಕಾಗಿದೆ. ಅದನ್ನು ಅರಿತು ಜನ ಬದಲಾಗಿ ಎಲ್ಲರೂ ನಿಯಮ ಪಾಲನೆ ಮಾಡಿದಾಗ ಅದುವೇ ನೀವು ನಮಗೆ ಮಾಡುವ ಬಹುದೊಡ್ಡ ಸನ್ಮಾನವಾಗುತ್ತದೆ ಎಂದರು.
ಡಿಸಿಐಬಿ ಸಿಬಂದಿ ಪ್ರವೀಣ್ ರೈ ಮಾತನಾಡಿ ನಾವು ನಮ್ಮ ಕರ್ತವ್ಯವನ್ನು ಮಾಡಿದ್ದೇವೆ. ಈ ಹಿಂದೆಯೂ ಬಹುದೊಡ್ಡ ಪ್ರಕರಣಗಳನ್ನು ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿಗಳು ಬೇಧಿಸಿದ್ದಾರೆ. ಆದರೆ ಒಂದು ಪ್ರಕರಣವನ್ನು ಬೇಧಿಸಿದ ಪೊಲೀಸರಿಗೆ ಊರವರು ಸೇರಿ ಸನ್ಮಾನ ಮಾಡುತ್ತಿರುವುದು ನನ್ನ ಅರಿವಿನಲ್ಲಿ ಇದೇ ಮೊದಲಾಗಿದೆ. ನಮ್ಮನ್ನು ಸಮಾಜ ಗುರುತಿಸುವುದು ಬಹಳಷ್ಟು ಅಪರೂಪ. ನಾವು ಹತ್ತು ಒಳ್ಳೆ ಕೆಲಸ ಮಾಡಿದರೆ ಅದರಲ್ಲಿ ಒಂದು ತಪ್ಪಾದರೂ ಅದನ್ನೆ ಬಹುದೊಡ್ಡ ತಪ್ಪು ಎಂದು ಬಿಂಭಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡುತ್ತಿರುವ ಈ ಸಮಾಜದಲ್ಲಿ ನಾವು ಮಾಡಿದ ಕೆಲಸವನ್ನು ಗುರುತಿಸಿರುವುದು ತುಂಬಾ ಸಂತಸ ತಂದಿದೆ. ಈ ಒಂದು ಕಾರ್ಯಕ್ರಮ ಇತರರಿಗೂ ಸ್ಪೂರ್ತಿಯಾಗಲಿ. ಈ ಒಂದು ಸನ್ಮಾನ ನಮಗೆ ಇನ್ನಷ್ಟು ಜವಾಬ್ದಾರಿಗಳು ಹೆಚ್ಚಾಗಿದೆ ಎಂದರು.ವಿಟ್ಲ ಠಾಣಾ ಸಿಬಂದಿಗಳಾದ ಲೊಕೇಶ್, ಪ್ರತಾಪ್ ರೆಡ್ಡಿ, ವಿನಾಯಕ್, ಪ್ರಸನ್ನ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಾಬುಆಳ್ವಾ, ಜಯಕರ ಶೆಟ್ಟಿ ಮರುವಾಳ, ವಿಲ್ಸನ್ ಮರುವಾಳ, ರಮೇಶ್ ಮರುವಾಳ, ಇಸ್ಮಾಯಿಲ್ ನಾಟೆಕಲ್ಲು, ಕೃಷ್ಣಪ್ಪ ಪೂಜಾರಿ ಬೇರಿಕೆ, ವಿಶ್ವನಾಥ ಕೆಮನಾಜೆ, ಇನಸ್ ಮಾರ್ಟಿನ್ ಮೊದಲಾದವರು ಸಿಬ್ಬಂದಿಗಳನ್ನು ಸನ್ಮಾನಿಸಿದರು. ಎಲ್ಯಣ್ಣ ಪೂಜಾರಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ವಿಟ್ಲ ಮುಡ್ನೂರು ಗ್ರಾ.ಪಂ.ನ ಮಾಜಿ ಸದಸ್ಯ ಅಬ್ದುಲ್ ರಹಿಮಾನ್ ವಂದಿಸಿದರು.