ವಿಟ್ಲ: ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ) ಚಂದಳಿಕೆ ವಿಟ್ಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಬೆಳ್ಳಿಹಬ್ಬ ಸಮಿತಿ, ಚಂದಳಿಕೆ ಇಲ್ಲಿನ ಬೆಳ್ಳಿಹಬ್ಬ ಸಂಭ್ರಮ ಸೆ.19 ರಿಂದ 22ರ ವರೆಗೆ ನಾಲ್ಕು ದಿನಗಳ ಕಾಲ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ವೈಭವದ ಶೋಭಾಯಾತ್ರೆಯೊಂದಿಗೆ ಬಹಳ ಅದ್ದೂರಿಯಾಗಿ ನಡೆಯಿತು.
ಸೆ.19ರಂದು ಬೆಳಗ್ಗೆ ಗಣಪತಿಹೋಮ, ಮೂರ್ತಿ ಪ್ರತಿಷ್ಠೆ, ಧ್ವಜಾರೋಹಣ ಬಳಿಕ ಹಲವು ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಭಜನಾ ಸಂಕೀರ್ತನೆಯ ನಂತರ ನಾದಬ್ರಹ್ಮ ಆರ್ಕೆಸ್ಟ್ರಾ ಮಂಗಳೂರು, ಗಣರಾಜ ಭಟ್ ಮತ್ತು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಸಭಾಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ನಿರ್ದೇಶನದ ಆರ್.ಕೆ.ಆರ್ಟ್ಸ್ ಚಿಣ್ಣರ ಮನೆ ವಿಟ್ಲ ಇವರಿಂದ ಶ್ರೀ ದೇವಿ ಜಗದಾಂಬಿಕೆ ನೃತ್ಯರೂಪಕ ಪ್ರದರ್ಶನಗೊಂಡಿತು.
ಸೆ.20 ರಂದು ಬೆಳಗ್ಗೆ 108 ಕಾಯಿಯ ಗಣಹೋಮ, ಬಳಿಕ ಮಂಗಳಾರತಿ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ದಾಸ ಸಂಕೀರ್ತನಕಾರ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಮಧ್ವಾದೀಶ ವಿಠಲದಾಸರು ಬಳಗದಿಂದ ಭಜನಾಮೃತ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಯತಿವರ್ಯರ ಹಾಗೂ ಹಲವು ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಠಲ ನಾಯಕ್ ಮತ್ತು ಬಳಗದವರಿಂದ ವಿನೂತನ ಶೈಲಿಯ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.
ಸೆ.21 ರಂದು ಬೆಳಗ್ಗೆ ಗಣಪತಿ ಹೋಮ ಬಳಿಕ, ಪಂಚಲಿಂಗೇಶ್ವರ ಭಜನಾ ಪರಿಷತ್ ವಿಟ್ಲ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಬೆಳ್ಳಿಹಬ್ಬದ ವಿಶೇಷವಾಗಿ ಸಂಜೆ ಶ್ರೀ ದೇವರಿಗೆ ಮಹಾರಂಗಪೂಜೆ ಸಹಿತ ಮೂಡಪ್ಪ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಈ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಜಯ್ಕುಮಾರ್ ಕೊಡಿಯಾಲ್ಬೈಲ್ ರಚಿಸಿ ನಿರ್ದೇಶಿರುವ ಕಲಾಸಂಗಮ ಕಲಾವಿದರಿಂದ ಸ್ವರಾಜ್ ಶೆಟ್ಟಿ ಅಭಿನಯದ ತುಳು ಸಾಂಸಾರಿಕ ನಾಟಕ ಮೈತಿದಿ ಪ್ರದರ್ಶನಗೊಂಡಿತು.
ಸೆ. 22 ರಂದು ಬೆಳಗ್ಗೆ ಗಣಪತಿಹೋಮ, ಭಜನಾ ಸೇವೆ, ಬಳಿಕ ಮಹಾಪೂಜೆ ಅನ್ನಸಂತರ್ಪಣೆ, ಬಳಿಕ ಮಧ್ಯಾಹ್ನ ವಿಜರ್ಸನಾ ಪೂಜೆ ನಡೆಯಿತು. ಸಂಜೆ ವಿವಿಧ ಸಂಘ ಸಂಸ್ಥೆಗಳ ಆಕರ್ಷಕ ಟ್ಲಾಬ್ಲೋ, ಹಾಗೂ ಸ್ತಬ್ದ ಚಿತ್ರಗಳೊಂದಿಗೆ ವಿಜೃಂಭಣೆಯ ಶೋಭಾಯಾತ್ರೆ ಮೆರವಣಿಗೆಯು ಚಂದಳಿಕೆಯಿಂದ ಹೊರಟು, ವಿಟ್ಲ ಪೇಟೆಯುದ್ದಕ್ಕೂ ಸಂಚರಿಸಿ ಕಾಶೀಮಠ ಕೆರೆಯಲ್ಲಿ ಗಣೇಶನ ಮೂರ್ತಿ ವಿಸರ್ಜನೆ ಮಾಡಲಾಯಿತು.