ಉತ್ತರಪ್ರದೇಶ: ಚೋಟಾ ರಾಜನ್ ಭಾರತದ ಭೂಗತ ಲೋಕವನ್ನು ಆಳಿದ ಒಂದು ಕಾಲದ ಡಾನ್. ಮುಂಬೈ ಸರಣಿ ಸ್ಪೋಟದ ರುವಾರಿ ದಾವೂದ್ ಇಬ್ರಾಹಿಂನ ಒಂದು ಕಾಲದ ಬಂಟ. ಈತನ ವಿರುದ್ಧ ಭಾರತದ ವಿವಿಧ ರಾಜ್ಯಗಳಲ್ಲಿ ಹತ್ತಾರು ಅಪರಾಧ ಪ್ರಕರಣಗಳು ದಾಖಲಾಗಿವೆ. ಕೆಲವು ಪ್ರಕರಣಗಳಲ್ಲಿ ಈತ ಕರ್ನಾಟಕ ಪೊಲೀಸರಿಗೂ ಅಗತ್ಯವಿದ್ದಾನೆ. ಈತನನ್ನು ಇತ್ತೀಚೆಗೆ ವಿದೇಶದಲ್ಲಿ ವಶಕ್ಕೆ ಪಡೆಯಲಾಗಿತ್ತು.
ಅಲ್ಲದೆ, ಭಾರತಕ್ಕೆ ಕರೆತರಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಇಂತಹ ಸಂದರ್ಭದಲ್ಲಿ ಉತ್ತರ ಪ್ರದೇಶದ ಕಾನ್ಪುರ ಅಂಚೆ ಇಲಾಖೆಯು ಕುಖ್ಯಾತ ಭೂಗತ ಪಾತಕಿಗಳಾದ ಚೋಟಾ ರಾಜನ್ ಮತ್ತು ಮುನ್ನಾ ಭಜರಂಗಿಯ ಚಿತ್ರಗಳಿರುವ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುವ ಮೂಲಕ ವಿವಾದಕ್ಕೆ ಗುರಿಯಾಗಿದೆ. ಅಂಚೆ ಚೀಟಿಗಳನ್ನು ‘ಮೈ ಸ್ಟಾಂಪ್’ ಯೋಜನೆಯಡಿ ಮುದ್ರಿಸಲಾಗಿದ್ದು, ಹಲವರು ಅಂಚೆ ಇಲಾಖೆ ಮತ್ತು ಉತ್ತರಪ್ರದೇಶ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಅಂಚೆ ಇಲಾಖೆ ಸಾಮಾನ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುವುದು ವಾಡಿಕೆ. ಆದರೆ, ಉತ್ತರಪ್ರದೇಶದ ಕಾನ್ಪುರ ಅಂಚೆ ಇಲಾಖೆ ಹೀಗೆ ಭೂಗತ ಪಾತಕಿಗಳ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಭಾರತದ ಸಾಧಕರಿಗೆ ಅಗೌರವ ತೋರಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.
ಪ್ರಕರಣದಲ್ಲಿ, ಚೋಟಾ ರಾಜನ್ ಮತ್ತು ಮುನ್ನಾ ಭಜರಂಗಿಯ ಚಿತ್ರಗಳನ್ನು ತಮ್ಮ ಸಂಬಂಧಿಕರು ಎಂದು ನೀಡಲಾಗಿತ್ತು. ಆದರೆ ಅಂಚೆ ಗುಮಾಸ್ತರು ಅದಕ್ಕೆ ಅತ್ಯಗತ್ಯವಾಗಿರುವ ಅವರ ಗುರುತಿನ ಪತ್ರಗಳನ್ನು ಕೇಳದೆ ತಲಾ 12 ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ್ದರು ಎನ್ನಲಾಗಿದೆ. ಚೋಟಾ ರಾಜನ್ ಪ್ರಸ್ತುತ ಮುಂಬೈ ಜೈಲಿನಲ್ಲಿದ್ದು, ಮುನ್ನಾ ಭಜರಂಗಿಯನ್ನು ಜುಲೈ 9, 2018 ರಂದು ಪಶ್ಚಿಮ ಉತ್ತರಪ್ರದೇಶದ ಬಾಗ್ಪತ್ ಜೈಲಿನಲ್ಲಿ ಹತ್ಯೆ ಮಾಡಲಾಗಿತ್ತು.