Saturday, June 28, 2025
spot_imgspot_img
spot_imgspot_img

ನಾಲ್ಕನೇ ಏಟು ಬಿದ್ದ ಕೋಣನಂತಾಗಿದೆ ಕಾಂಗ್ರೆಸ್-ಡಿ.ವಿ.ಸದಾನಂದಗೌಡ

- Advertisement -
- Advertisement -

ಮೈಸೂರು: ಅಕ್ಟೋಬರ್ 08: 1960ರ ವೇಳೆಗೆ ಆಹಾರಕ್ಕಾಗಿ ನಮ್ಮ ದೇಶ ಇತರರ ಬಳಿ ಭಿಕ್ಷೆ ಬೇಡುವ ಸ್ಥಿತಿ ಇತ್ತು. ಈಗ ಇಡೀ ಜಗತ್ತಿಗೆ ಆಹಾರ ಪೂರೈಸುವ ಶಕ್ತಿ ಹೊಂದಿದ್ದೇವೆ. ಆದರೆ, ಕಾಂಗ್ರೆಸ್‌ನವರು ಮಾತ್ರ ರೈತರ ಹಾದಿ ತಪ್ಪಿಸಿ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

‘ಇದೇ ವಿಚಾರವನ್ನು ಹಿಂದೆ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಸಿತ್ತು.‌ ಈಗ ಮಾತ್ರ ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ದ್ವಂದ್ವದ ಬಗ್ಗೆ ಮತ್ತು ಮಸೂದೆಯ ಲಾಭದ ಬಗ್ಗೆ ಪ್ರತಿ ರೈತನ ಮನೆಗೆ ತೆರಳಿ ಹೇಳುತ್ತೇವೆ. ಕೃಷಿ ಮಸೂದೆಗಳ ಉದ್ದೇಶ ತಿಳಿಸಿಕೊಡಲಿದ್ದೇವೆ. ರೈತ ಮುಖಂಡರು ಚರ್ಚೆಗೆ ಬಂದರೂ ಸಿದ್ಧ ಎಂದು ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿದ್ದ ವೇಳೆ 49 ಕಾರ್ಪೊರೇಟ್‌ ಕಂಪನಿಗಳಿಗೆ ಪರವಾನಗಿ ಕೊಟ್ಟಿದ್ದರು. ವಿವಿಧ ಸ್ವರೂಪದಲ್ಲಿ ಲಾಭ ಮಾಡಿಕೊಟ್ಟಿದ್ದರು. ಈಗ ನಮ್ಮ ನಿಲುವನ್ನು ಪ್ರಶ್ನಿಸುತ್ತಿದ್ದಾರೆ. ಕೊಳಕಿನಲ್ಲಿ ಮಲಗಿದ ಕೋಣನಿಗೆ ಒಂದು ಏಟು ಬಿದ್ದರೆ ಎಲ್ಲೋ ಪೆಟ್ಟು ಬಿದ್ದ ರೀತಿ ಕೇಳುತ್ತದೆ. ಎರಡು ಮತ್ತು ಮೂರನೇ ಏಟು ಬಿದ್ದಾಗ ಚೂರು ಎಚ್ಚರ ಆಗುತ್ತದೆ. ನಾಲ್ಕನೇ ಏಟು ಬಿದ್ದಾಗ ತನಗೇ ಪೆಟ್ಟು ಬಿದ್ದಿರುವುದೆಂದು ಅರಿವಿಗೆ ಬರುತ್ತದೆ. ಕಾಂಗ್ರೆಸ್‌ನವರಿಗೆ ಈಗ ನಾಲ್ಕನೇ ಏಟು ಬಿದ್ದಿದೆ. ಈಗಷ್ಟೇ ಎಚ್ಚೆತ್ತುಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಹಿಂದೆ ನಮಗೆ ಬೇಕಾದಷ್ಟು ಆಹಾರ ದೇಶದಲ್ಲಿ ಸಿಗುತ್ತಿರಲಿಲ್ಲ. ಇಷ್ಟಾದರೂ ಕಾಂಗ್ರೆಸ್‌ನವರು ಪರ್ಯಾಯ ಹುಡುಕಲಿಲ್ಲ‌. ಕಾನೂನಿನ ಅಂಶಕ್ಕೆ ತಿದ್ದುಪಡಿಯನ್ನೂ ತಂದಿರಲಿಲ್ಲ. 1990ರ ಉದಾರೀಕರಣ ಜಾರಿಗೆ ತಂದಾಗಲೂ ರೈತರಿಗೆ ನೆರವು ಸಿಗಲಿಲ್ಲ. ಈಗ ಕೃಷಿ ಮಸೂದೆಗಳನ್ನು ಪರಿವರ್ತಿಸಿ, ರೈತರಿಗೆ ಸ್ವಾಭಿಮಾನ ನೀಡುವ ಮಸೂದೆ ತಂದಿದ್ದೇವೆ ಎಂದು ಕೃಷಿ ಮಸೂದೆಗಳ ಪರವಾಗಿ ಬ್ಯಾಟಿಂಗ್ ಮಾಡಿದರು.

- Advertisement -

Related news

error: Content is protected !!