ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದು ಪ್ರಸಿದ್ಧರಾಗಿದ್ದ ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಅವರ ವಿಧಾನಸೌಧದೊಳಗಿದ್ದ ಫೋಟೋಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊರಗೆ ಹಾಕಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ವಿಧಾನಸೌಧದಲ್ಲಿ ಈಗಾಗಲೇ ಎಲ್ಲ ಸಚಿವರಿಗೂ ಕೊಠಡಿಗಳನ್ನು ಕೊಡಲಾಗಿದ್ದು, ಹಳೆಯ ಕೊಠಡಿಯನ್ನು ಸ್ವಚ್ಛಗೊಳಿಸಿ ಸುಣ್ಣ, ಬಣ್ಣ ಬಳಿಸಿ ತಮಗೆ ಬೇಕಾದಂತೆ ಬದಲಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಈ ವೇಳೆ ದೇಶದ ನಡೆದಾಡುವ ದೇವರೆಂದೇ ಖ್ಯಾತರಾದ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಫೋಟೋಗಳನ್ನು ಬೇಕಾಬಿಟ್ಟಿಯಾಗಿ ಹೊರಗೆ ಎಸೆದಿದ್ದಾರೆ. ಇದರ ಫೋಟೋಗಳು ವೈರಲ್ ಆಗಿದ್ದು ಆಕ್ರೋಶದ ಮಾತುಗಳು ಕೇಳಿಬಂದಿವೆ.
https://twitter.com/BJP4Karnataka/status/1664291783269056512?s=20
ಈ ಕುರಿತು ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದು, “ಕಾಂಗ್ರೆಸ್ ಸರ್ಕಾರಕ್ಕೆ ಕೇಸರಿ ಎಂದರೆ ದ್ವೇಷ, ಶತ್ರುಭಾವ! ಇದೆ. ಇಂದು ನಡೆದಾಡುವ ದೇವರು, ಕಾಯಕಯೋಗಿ, ತ್ರಿವಿಧದಾಸೋಹಿ ಪರಮ ಪೂಜನೀಯ ಡಾ।। ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಭಾವಚಿತ್ರವನ್ನು ವಿಧಾನಸೌಧದ ಕೊಠಡಿಯಿಂದ ತೆರವುಗೊಳಿಸಿ ಪಡಸಾಲೆಯಲ್ಲಿ ಉರುಳಾಡುವಂತೆ ಮಾಡಿ ಅಪಮಾನಿಸಿರುವುದು ಅಕ್ಷಮ್ಯ ಅಪರಾಧ! ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಈ ಕೂಡಲೆ ರಾಜ್ಯದ ಜನತೆಯ ಕ್ಷಮೆ ಕೋರಿ ಪೂಜ್ಯ ಸ್ವಾಮೀಜಿಯವರ ಭಾವಚಿತ್ರವನ್ನು ಸಕಲ ಗೌರವಗಳೊಂದಿಗೆ ಪುನಃ ಲಗತ್ತಿಸಲು ಆಗ್ರಹಿಸುತ್ತೇವೆ” ಎಂದು ತಿಳಿಸಿದೆ.