



ರೇಣುಕಾಸ್ವಾಮಿ ಕೊಲೆ ವಿಚಾರವಾಗಿ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣವಾಗಿ ನಟ ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪರವರು ಡಿ ಕೆ ಶಿವಕುಮಾರ್ರವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಂದಿದ್ದಾರೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ನನ್ನ ಭೇಟಿಗೆ ಸಮಯ ಕೇಳಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿನ್ನೆ ರಾಮನಗರದಲ್ಲಿ ಹೇಳಿದ್ದರು. ಅದರಂತೆ ಇಂದು ಬೆಳಗ್ಗೆ ಡಿಕೆಶಿಯವರನ್ನು ಭೇಟಿ ಮಾಡಲು ಬಂದಿದ್ದಾರೆ.
ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ಡಿಕೆಶಿ ಭೇಟಿ ಬಂದಿದ್ದಾಗ ದರ್ಶನ್ ಅಭಿಮಾನಿಗಳಿಂದ ಡಿ ಬಾಸ್, ಡಿ ಬಾಸ್ ಘೋಷಣೆ ಕೇಳಿಬಂದಿತ್ತು. ಈ ವೇಳೆ ಅದರ ಬಗ್ಗೆ ನಾಳೆ ಮಾತನಾಡ್ತೀನಿ ಎಂಬ ಡಿ ಕೆ ಶಿವಕುಮಾರ್, ದರ್ಶನ್ರವರ ಪತ್ನಿ ಭೇಟಿ ಮಾಡೋಕೆ ಸಮಯ ಕೇಳಿದ್ದಾರೆ. ನಾಳೆ ಬೆಳಿಗ್ಗೆ ಅವರನ್ನ ಭೇಟಿ ಮಾಡ್ತೇನೆ. ಏನಾದ್ರೂ ಅನ್ಯಾಯ ಆಗಿದ್ರೆ ಸರಿಪಡಿಸಲು ಪ್ರಯತ್ನ ಮಾಡ್ತೇನೆ. ಆದರೆ ನಾವು ಕಾನೂನಿಗೆ ಗೌರವ ಕೊಡಬೇಕು. ದೇಶದ ಹಾಗೂ ನೆಲದ ಕಾನೂನು ಪಾಲಿಸಬೇಕು. ಅನ್ಯಾಯ ಯಾರಿಗೆ ಆಗಿದ್ದರೂ ನಾವೆಲ್ಲ ಸೇರಿ ನ್ಯಾಯ ಒದಗಿಸುವ ಕೆಲಸ ಮಾಡೋಣ. ನೊಂದವರೆಲ್ಲರಿಗೂ ತಾಯಿ ಚಾಮುಂಡೇಶ್ವರಿ ಅನುಗ್ರಹ ನೀಡಲಿ ಎಂದು ಹೇಳಿದ್ದಾರೆ.
ಅದರಂತೆಯೇ ವಿಜಯಲಕ್ಷ್ಮೀ ಮತ್ತು ಮೈದುನ ದಿನಕರ್ ಜೊತೆಗೆ ಡಿಕೆಶಿಯವರ ನಿವಾಸಕ್ಕೆ ಬಂದಿದ್ದಾರೆ. ದರ್ಶನ್ ಕುರಿತಾಗಿ ಹಲವು ವಿಚಾರಗಳನ್ನು ಮಾತನಾಡಲು ಕಾದು ಕುಳಿತಿದ್ದಾರೆ.