





ರಾಯಚೂರು: ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸೆಂಟ್ರಲ್ ಶಾಫ್ಟ್ನ 28 ಅಡಿಯಲ್ಲಿ ಏರ್ ಬ್ಲಾಸ್ಟ್ನಿಂದ ಕಲ್ಲು ಅದಿರು ಕುಸಿದು ಒಬ್ಬ ಕಾರ್ಮಿಕ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಶರಣಬಸವ ವೀರಾಪುರ (35) ಮೃತ ಕಾರ್ಮಿಕ. ಗಾಯಾಳು ನಿರೂಪಾದಿ ಪಾಮನಕಲ್ಲೂರಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಕಲ್ಲು ಅದಿರಿನಡಿ ಸಿಲುಕಿರುವ ಮೃತ ದೇಹವನ್ನು ಹೊರ ತರಲು ಕಾರ್ಯಾಚರಣೆ ಮುಂದುವರೆದಿದೆ. ಕಳೆದ ವರ್ಷ ಚಿನ್ನದ ಗಣಿ ಕಂಪನಿಯ ಆವರಣದಲ್ಲೇ ಇರುವ ಮಲ್ಲಪ್ಪ ಶಾಫ್ಟ್ನ ಭೂಮಿಯ ಕೆಳಮೈ ವಿಭಾಗದಲ್ಲಿ ಬೆಳಗಿನ ಜಾವ 3.30ಕ್ಕೆ ಭೂಕುಸಿತವಾಗಿ ಒಬ್ಬ ಕಾರ್ಮಿಕ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಪ್ರತಿ ವರ್ಷ ಕಂಪನಿಯಲ್ಲಿ ದುಡಿಯುವ ಕಾರ್ಮಿಕರು ಸಾವು ನೋವುಗಳು ಸಂಭವಿಸಿದರೂ ಕಂಪನಿ ಜಾಗ್ರತೆ ವಹಿಸುತ್ತಿಲ್ಲ. ಕಾರ್ಮಿಕರಿಗೆ ಯಾವುದೇ ರಕ್ಷಾ ಕವಚಗಳು ಇಲ್ಲದಾಗಿದೆ. ಕಾರ್ಮಿಕನ ಸಾವಿಗೆ ಕಂಪನಿಯ ಆಡಳಿತ ನಿರ್ಲಕ್ಷ್ಯವೇ ಕಾರಣವೆಂದು ಕಂಪನಿ ಕಾರ್ಮಿಕ ಆರೋಪಿಸಿದ್ದಾರೆ.