ಮಂಗಳೂರು: ಅ. 27: ದಕ್ಷಿಣಕನ್ನಡ ಹಾಗೂ ಉಡುಪಿ ಉಭಯ ಜಿಲ್ಲೆಗಳಲ್ಲಿ ಇದೀಗ ಮತ್ತೆ ರೌಡಿ ಕಾಳಗ ಆರಂಭಗೊಂಡಿದೆ. ಈ ಜಿಲ್ಲೆಗಳಲ್ಲಿ ನಡೆಯುವ ಎಲ್ಲಾ ಅಪರಾಧ ಕೃತ್ಯಗಳಲ್ಲಿ ಉಭಯ ಜಿಲ್ಲೆಗಳ ರೌಡಿಗಳ ಪಾತ್ರ ಹೆಚ್ಚಾಗುತ್ತಿವೆ. ವಾರಕ್ಕೊಂದರಂತೆ ಜಿಲ್ಲೆಯಲ್ಲಿ ಇದೀಗ ರೌಡಿ ಕಾಳಗದಿಂದಾಗಿ ಹೆಣಗಳು ಉರುಳಲಾರಂಭಿಸಿವೆ.
ಎರಡು ವಾರದ ಹಿಂದೆ ಉಡುಪಿ ಜಿಲ್ಲೆಯಲ್ಲಿ ನಡೆದ ಕಿಶನ್ ಹೆಗ್ಡೆ ಕೊಲೆ ಹತ್ಯೆಯ ಬಳಿಕ ಈ ಕೊಲೆಗೆ ಪ್ರತೀಕಾರವಾಗಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮತ್ತೊಂದು ಹತ್ಯೆಯಾಗಿದೆ. ತುಳು ಚಿತ್ರರಂಗದ ನಟ ಸುರೇಂದ್ರ ಬಂಟ್ವಾಳ್ನನ್ನು ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರವಾಗಿ ಹತ್ಯೆ ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ಮೆಲ್ಕಾರಿನಲ್ಲಿ ರೌಡಿ ಶೀಟರ್ ಚೆನ್ನಾ ಫಾರೂಕ್ ಹತ್ಯೆ ನಡೆದಿತ್ತು. ಈ ಕೊಲೆಯನ್ನು ರೌಡಿ ಶೀಟರ್ ಖಲೀಲ್ ತಂಡದಿಂದ ಕೃತ್ಯ ನಡೆದಿತ್ತು.
ಈ ಎಲ್ಲಾ ಪ್ರಕರಣದಲ್ಲೂ ರೌಡಿ ಶೀಟರ್ ಗಳೇ ಹೆಚ್ಚಾಗಿರುವ ಕಾರಣ ಜಿಲ್ಲೆಯಲ್ಲಿ ರೌಡಿಶೀಟರ್ ಗಳ ಮೇಲೆ ನಿಗಾಯಿಡುವ ಕೆಲಸವನ್ನು ಪೋಲೀಸ್ ಇಲಾಖೆ ಆರಂಭಿಸಿದ್ದು, ಯಾವುದೇ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆಯನ್ನೂ ನೀಡಿದೆ. ಅಲ್ಲದೆ ಜಿಲ್ಲೆಯಲ್ಲಿ ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಪುಡಿ ರೌಡಿಗಳ ಪಟ್ಟಿಯನ್ನು ಈಗಾಗಲೇ ಪೋಲೀಸ್ ಇಲಾಖೆ ಸಿದ್ಧಪಡಿಸಿದೆ.
ಸುಮಾರು ನೂರಕ್ಕೂ ಮಿಕ್ಕಿದ ರೌಡಿಗಳ ಪಟ್ಟಿಯನ್ನು ಸಿದ್ಧಪಡಿಸಿರುವ ಪೋಲೀಸ್ ಇಲಾಖೆ ಈ ರೌಡಿಗಳ ಮೇಲೆ ಗೂಂಡಾ ಕಾಯ್ದೆ ಮೂಲಕ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ವರದಿಯನ್ನು ಸರಕಾರಕ್ಕೆ ಶೀಘ್ರವೇ ಮಂಡಿಸಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ B.M ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯು ಕೇರಳದ ಗಡಿಯನ್ನು ಹಂಚಿಕೊಂಡಿದ್ದು, ಕೇರಳ ರಾಜ್ಯದ ನೊಟೋರಿಯಸ್ ಕ್ರಿಮಿನಲ್ಗಳೂ ಜಿಲ್ಲೆಯನ್ನು ಪ್ರವೇಶಿಸಿ ಅಪರಾಧಗಳನ್ನು ಎಸಗಿ ಪರಾರಿಯಾಗುತ್ತಿರುವ ಪ್ರಕರಣಗಳೂ ಸಾಕಷ್ಟು ಪತ್ತೆಯಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ನಡೆಯುವ ಬಹುತೇಕ ಅಪರಾಧ ಕೃತ್ಯಗಳಲ್ಲಿ ಕೇರಳದ ನಂಟೂ ಇರುವ ಕಾರಣ ಕೇರಳ ಗಡಿಭಾಗದಲ್ಲೂ ಕಟ್ಟುನಿಟ್ಟಿನ ನಿಗಾವಹಿಸಲು ಜಿಲ್ಲಾ ಪೋಲೀಸ್ ತೀರ್ಮಾನಿಸಿದೆ.