ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ ಭಾರತದ ಅತೀ ದೊಡ್ಡ ತೆಂಗು ರೈತರ ಸಂಸ್ಥೆಯಾಗಿದ್ದು, ಸುಮಾರು 14430 ಸದಸ್ಯರನ್ನೊಳಗೊಂಡಿದೆ. ಪುತ್ತೂರು ಕಲ್ಲಾರೆ ಪವಾಜ್ ಕಾಂಪ್ಲೆಕ್ಸ್ ನಲ್ಲಿ ಕಾರ್ಪೊರೇಟ್ ಕಛೇರಿಯ ಉದ್ಘಾಟನೆ ಜು.1ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿದೆ ಎಂದು ಕಂಪನಿಯ ಅಧ್ಯಕ್ಷ ಕುಸುಮಾಧರ್ ಎಸ್.ಕೆ. ಹೇಳಿದ್ದಾರೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಕಾವೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಕಛೇರಿಯ ಉದ್ಘಾಟನೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ನಡೆಸಲಿದ್ದಾರೆ.
ಪಂಚಕಲ್ಪ ಯೋಜನೆಗಳ ಉದ್ಘಾಟನೆ ಪುತ್ತೂರು ಪುರಭವನದಲ್ಲಿ ಜು.2ರಂದು ಬೆಳಗ್ಗೆ 9.30ರಂದು ನಡೆಯಲಿದ್ದು, ಉದ್ಘಾಟನೆಯನ್ನು ಕಾಸರಗೋಡು ಸಿಪಿಸಿಆರ್ ಐ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ನಡೆಸಲಿದ್ದು, ಅಬಕಾರಿ ಆಯುಕ್ತ ಬಿಂದು ಶ್ರೀ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಎಚ್., ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಮೇಶ್ ಮತ್ತಿತರರು ಭಾಗವಹಿಸಲಿದ್ದಾರೆ.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚೇತನ್ ಎ. ಮಾತನಾಡಿ ರೈತರಿಗೆ ಉತ್ತಮ ಆದಾಯವಾಗಿಸುವ ನಿಟ್ಟಿನಲ್ಲಿ ಕಲ್ಪವೃಕ್ಷ ಯೋಜನೆ, ಆರೋಗ್ಯಕರ ಪಾನೀಯದ ಮೂಲಕ ರೈತರಿಗೆ 8 ತೆಂಗಿನ ಮರದ ಮೂಲಕ 2 ಲಕ್ಷ ಆದಾಯ ತರುವ ಕಲ್ಪರಸ ಯೋಜನೆ, ಸದಸ್ಯರಿಗೆ ಬ್ಯಾಂಕಿಂಗ್ ಸೇವೆ ನೀಡುವ ನಿಟ್ಟಿನಲ್ಲಿ ಕಲ್ಪ ಸಮೃದ್ಧಿ ಯೋಜನೆ, ಶುಲ್ಕರಹಿತ ಕರೆ ಹಾಗೂ ವೆಬ್ ಸೈಟ್ ಮೂಲಕ ಸ್ಪಂದಿಸುವ ಕಲ್ಪ ಸಂಪರ್ಕ ಯೋಜನೆ, ಉತ್ತಮ ಧಾರಣೆ ಹಾಗೂ ತೆಂಗಿನಕಾಯಿ ತೆಗೆಯುವವರನ್ನು ಒದಗಿಸುವ ಕಲ್ಪಸೇವೆ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. ಎನ್.ಜಿ.ಒ. ಡಾ. ರಾಜೇಶ್ ಬೆಜ್ಜಂಗಳ, ನಿರ್ದೇಶಕರಾದ ವರ್ಧಮಾನ್ ಎನ್., ಲತಾ ಪಿ. ಉಪಸ್ಥಿತರಿದ್ದರು