ಕುಂದಾಪುರ: ಹಾಡಹಗಲೇ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ನಗದು ಸಹಿತ ಸಾವಿರಾರು ರೂ. ಮೌಲ್ಯದ ಸೊತ್ತು ಕಳವುಗೈದಿರುವ ಘಟನೆ ಕುಂದಾಪುರದ ವಡೇರಹೋಬಳಿ ಗ್ರಾಮದ ಶ್ರೀ ಯಕ್ಷೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.
ಅಪರಾಹ್ನ 3 ಗಂಟೆಯ ಅವಧಿಯಲ್ಲಿ ವಡೇರಹೋಬಳಿ ಗ್ರಾಮದ ಶ್ರೀ ಯಕ್ಷೇಶ್ವರಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ, ಕಾಣಿಕೆ ಹುಂಡಿಯಲ್ಲಿದ್ದ 15 ಸಾವಿರ ರೂ. ನಗದು ಸಹಿತ ಒಟ್ಟಾರೆ 30 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ.
ಬೆಳಗ್ಗೆ 10ಕ್ಕೆ ದೇವಸ್ಥಾನದ ಅರ್ಚಕರು ಪೂಜೆ ಮುಗಿಸಿ, ಚಿಲಕ ಹಾಕಿ ತೆರಳಿರುತ್ತಾರೆ. ಅದೇ ದಿನ ಅಪರಾಹ್ನ 3 ಗಂಟೆ ಸುಮಾರಿಗೆ ದೇವಸ್ಥಾನದ ಕಾರ್ಯದರ್ಶಿ ಬಂದು ನೋಡಿದಾಗ ಕಾಣಿಕೆ ಹುಂಡಿ ಕಳವಾಗಿರುವುದು ತಿಳಿದುಬಂದಿದೆ.. ಕೂಡಲೇ ಅವರು ದೇವಸ್ಥಾನದ ಇತರರಿಗೆ ತಿಳಿಸಿದ್ದು, ಆ ಬಳಿಕ ನೋಡಿದಾಗ 2 ಕೆ.ಜಿ. ತೂಕದ ಅಂದಾಜು 5 ಸಾ.ರೂ. ಮೌಲ್ಯದ ತಾಮ್ರದ ಕೊಡಪಾನ, 6 ಕೆ.ಜಿ. ತೂಕದ ಅಂದಾಜು 10 ಸಾ. ರೂ. ಮೌಲ್ಯದ ಹಿತ್ತಾಳೆ ದೀಪ, 15 ಸಾ.ರೂ. ನಗದು ಸಹಿತ 30 ಸಾವಿರ ರೂ. ಮೌಲ್ಯದ ಸೊತ್ತುಗಳು ಕಳವಾಗಿರುವುದು ತಿಳಿದುಬಂತು.
ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.