


ಹುಳುಹುಟ್ಟಿ ಸಾಯುತ್ತಿರೆ, ನೆಲ ಸವೆದು ಕರಗುತ್ತಿರೆ ಕಡಲೊಳೆತ್ತಲೋ ಹೊಸದ್ವೀಪವೇಳುವುದು ।। ಕಳೆಯಿತೊಂದಿರಲಿಲ್ಲಿ ಬೆಳೆಯುದಿನ್ನೊಂದೆಲ್ಲೊ ಅಳಿವಿಲ್ಲ ವಿಶ್ವಕ್ಕೆ ಮಂಕುತಿಮ್ಮ।।
ಪ್ರಪಂಚದಲ್ಲಿ ಹುಳುಹುಟ್ಟಿ ಸಾಯುವುದು, ನೆಲ ಸವೆದು ಕರಗಿ ಸಮುದ್ರದ ಭಾಗವಾಗುವುದು ,ಇನ್ನೆಲ್ಲೋ ಒಂದು ದ್ವೀಪ ಹುಟ್ಟಿಕೊಳ್ಳುವುದು ಹೀಗೆ ನಿರಂತರ ಕ್ರಿಯೆಗಳು ನಡೆಯುವವು. ಈ ವಿಶ್ವಕ್ಕೆ ನಾಶವೆಂಬುದಿಲ್ಲ ,ದೈವ ಸೃಷ್ಟಿಯೇ ಹಾಗೆ ..ಮಾನವ ಪ್ರೇರಿತವೂ ಅಲ್ಲ , ನಿರ್ಮಿತವೂ ಅಲ್ಲ. ಸೃಷ್ಟಿಯ ಅದ್ಭುತ ರಚನೆಗಳಲ್ಲಿ ಅಳತೆ ಮೀರಿದ ಅನಂತತೆಯಲ್ಲಿ ಆಗಸ, ಭೂಮಿ, ಸಾಗರಗಳ ಅಗಾಧತೆಯ ಮುಂದೆ ಎಲ್ಲವೂ ತೃಣ ,ಕುಬ್ಜವೇ ಆಗಿದೆ .
ಈ ಪೃಥ್ವಿಯಲ್ಲಿ ಸ್ಪುರಿಸುವ ಸೌಂದರ್ಯರಸ ಅವರ್ಣನೀಯವಾದದ್ದು. ಪ್ರಕೃತಿಯೊಂದಿಗೆ ಆತ್ಮಲೀನವಾಗುವಾಗ ಉಳಿದೆಲ್ಲವೂ ಶುಷ್ಕ, ನೀರಸ .ಪ್ರಕೃತಿಜೊತೆ ತಾನೇ ತಾನಾಗಿ ಹರಿಯುವ ಪದಪುಂಜಗಳು ಭಾವ ತನ್ನಯತೆಗೆ ಸಾಕ್ಷಿಯಾಗಬಲ್ಲದು..
ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನ್ಯಗ್ರೋಧಬೀಜಂ ಕೆಲವಂ ಸಿಡಿದು ಪೆರ್ಮರವಾಗದೆ ಲೋಕದಲ್ ಮಿಡಿ ಪಣ್ಣಗಾದೆದೈವಮಿದೆಯಲ್ ಕಾಲಾನುಕಾಲಕ್ಕೆ ತಾಂ ಬಡವಂ ಬಲ್ಲಿದನಾಗನೇ ಹರಹರ ಶ್ರೀ ಚನ್ನ ಸೋಮೇಶ್ವರ ।।
ಕಾಲಾನುಕಾಲಕ್ಕೆ ಎಲ್ಲಾ ಕ್ರಿಯೆಗಳು ನಡೆಯುತ್ತಲೇ ಬರುತ್ತಿದೆ. ಆದರೂ ಮಾನವ ತನ್ನ ಕೃತ್ಯಕ್ಕೆ ತಾನೇ ಬೀಗುತ್ತಿದ್ದಾನೆ. ಇಡೀ ಪೃಥ್ವಿಯನ್ನು ಹಾಳುಗೆಡಹುತ್ತಾ ಯಾವುದೋ ಅಭಿವೃದ್ಧಿ ಮಾಡುತ್ತಿದ್ದೇನೆ ಎಂಬ ಭ್ರಮೆಯಲ್ಲಿದ್ದಾನೆ . ಇಳೆಯನ್ನು ಹಾಳು ಮಾಡುತ್ತಾ ಅದು ತನ್ನನ್ನು ರಕ್ಷಿಸುತ್ತದೆ ಎಂಬ ದೃಢವಾದ ನಂಬಿಕೆಯಲ್ಲಿದ್ದಾನೆ. ಆದರೆ ಈ ನಂಬಿಕೆಯೇ ಪೃಥ್ವಿಗೆ ಇಂದು ಮುಳುವಾಗಿದೆ .
ಸಮುದ್ರ ವಸನೇ ದೇವಿ ಪರ್ವತಸ್ತನ ಮಂಡಲೆ ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆ ।ಎಂಬಲ್ಲಿ ಸಮುದ್ರವೇ ವಸ್ತ್ರವಾಗಿ , ಪರ್ವತಗಳೇ ಸ್ತನಗಳಾಗಿ ವಿಷ್ಣು ಪತ್ನಿಗೆ ನಮಸ್ಕರಿಸುವ ಹಿನ್ನೆಲೆ , ಪ್ರಕೃತಿ ಆರಾಧನೆ ಪೃಥ್ವಿಯ ರಕ್ಷಣೆಯೇ ಆಗಿದೆ. ಪ್ರಮಾಣಬದ್ಧವಾದ ಸಮಗ್ರ ವಿಕಸನವೇ ಪ್ರಕೃತಿಯ ಸ್ವಭಾವ. ಒಂದು ಮಿತಿಯೊಳಗೆ ಪ್ರಮಾಣ ಬದ್ಧತೆ ಕೆಟ್ಟಾಗ ಅದನ್ನು ಸಮ ಸ್ಥಿತಿಗೆ ತರುವ ಶಕ್ತಿ ಪ್ರಕೃತಿಯಲ್ಲಿದೆ .ಈ ಮಿತಿ ಅತಿಕ್ರಮಣವಾದಾಗ ಪ್ರಕೃತಿ ವಿಕೋಪಗಳು ಉಂಟಾಗುವುದು. ಈ ಭೂಮಿಯಲ್ಲಿ ಎಲ್ಲರಿಗೂ ಕ್ರಿಯಾತ್ಮಕ ರಚನಾತ್ಮಕ ಜೀವಪರ ಪಾತ್ರವಿದೆ .ಅದನ್ನು ಕಡೆಗಣಿಸಿ ಬಾಳಲಾರೆವು ನಾವು . ಆದರೆ ಪ್ರಕೃತಿ ನಮ್ಮ ಹೊರತಾಗಿ ಇರಬಲ್ಲದು. ಇಂದು ಪೃಥ್ವಿ ಅಪಾಯದಡೆಗೆ ಸಾಗಿದೆ . ಅದಕ್ಕೆ ಮುಖ್ಯ ಕಾರಣ ನಾಗಾಲೋಟದಲ್ಲಿ ಸಾಗುತ್ತಿರುವ ವೈಜ್ಞಾನಿಕ ಪ್ರಗತಿ ಹಾಗೂ ಮಾನವನ ಸ್ವಾರ್ಥ ಎಂದರೆ ತಪ್ಪಾಗಲಾರದು. ಯಾವುದೇ ದೇಶದ ಪ್ರಗತಿಯಲ್ಲಿ ವೈಜ್ಞಾನಿಕ ತಾಂತ್ರಿಕ ಶಿಕ್ಷಣ ಮತ್ತು ಸಾಧನೆ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದು ನಿರ್ವಿವಾದ ವಿಷಯ . ಇಲ್ಲಿ ಗುಣಾತ್ಮಕ ಚಿಂತನೆ ಅಗತ್ಯವಾಗಿದೆ. ವೈಜ್ಞಾನಿಕ ತರಬೇತಿ ಪಡೆದ ಯುವ ಜನಾಂಗದ ಅಧ್ಯಯನ ಉಪಯುಕ್ತವಾಗಿದೆ . ವೈಜ್ಞಾನಿಕ ತಂತ್ರಜ್ಞಾನಗಳು ದಾರಿದೀಪವಾಗಿದ್ದು ,ಬಾಹ್ಯಾಕಾಶ ಸಾಧನೆ ಸುಲಭ ಅಣು ಶಕ್ತಿ, ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನಗಳ ಮೂಲಕ ಎಂತಹ ಸಮಸ್ಯೆಯನ್ನು ಮೆಟ್ಟಿ ನಿಲ್ಲುವ ಹಂತದಲ್ಲಿ ನಾವಿದ್ದೇವೆ, ಆದರೆ ಎಲ್ಲದಕ್ಕೂ ಈ ಭೂಮಿಯೇ ಪ್ರಯೋಗ ಶಾಲೆ ಎಂಬಂತೆ ವಿಜಯೋತ್ಸವ ಮಾಡುತ್ತಾ ಮಡಿಲನ್ನು ಒಡಲನ್ನು ಮರೆತು ಯುದ್ಧ ಮಾಡುತ್ತಿದ್ದೇವೆ . ಸಾಲು ಸಾಲಾಗಿ ಸಾಧನೆಗಳು , ಮುಗಿಲು ಮುಟ್ಟಿ ನಮ್ಮ ಬೆನ್ನು ನಾವೇ ತಟ್ಟಿ ಪ್ರಯೋಜನವಿಲ್ಲ. ಈ ಪ್ರಗತಿಯ ಇನ್ನೊಂದು ಕರಾಳ ವಾಸ್ತವ ಎಂದರೆ ನಮ್ಮ ಪೃಥ್ವಿಯ ಮೇಲೆ ಆಗುತ್ತಿರುವ ದೌರ್ಜನ್ಯ.
ಈ ಭೂಮಿ ಎಲ್ಲರ ಆಸೆಗಳನ್ನು ಪೂರೈಸಬಲ್ಲದು ಆದರೆ ದುರಾಸೆಗಳನ್ನಲ್ಲ . ನಮಗಿರೋದು ಒಂದೇ ಭೂಮಿ. ಅದು ನಮ್ಮ ತಾತ ಮುತ್ತಾತರಿಂದ ಪಡೆದ ಬಳುವಳಿ ಅಲ್ಲ, ಮಕ್ಕಳಿಂದ ಮೊಮ್ಮಕ್ಕಳಿಂದ ಎರವಲಾಗಿ ಪಡೆದದ್ದು.. ಅಷ್ಟೊಂದು ಮಹತ್ವದ್ದು ಅನಿಸಿರಲಿಲ್ಲ ಯಾರೋ ಎಸೆದ ಕಾಗದದ ಚೂರು ಎಂಬ ಡಾಕ್ಟರ್ ಸಿದ್ದಲಿಂಗಯ್ಯನವರ ಕವನದಂತೆ ಒಂದು ಚೂರು ಕಾಗದ ನೋಡಬೇಕಾದರೂ ಒಳಗಣ್ಣು ಇರಬೇಕು ಅಂತೇ ಇಳೆಯ ಸತ್ಯವನ್ನು ಸಾಕ್ಷಾತ್ಕಾರಗೊಳಿಸಲು ತದ್ಯಾತ್ಮತೆ , ಅಂತರ ದೃಷ್ಟಿ ಬೇಕೇ ಬೇಕು.
ಇಂದು ಇಡೀ ಭೂಮಂಡಲ ಸಮಸ್ಯೆ ಮಡುವಾಗಲು ಮಾನವನ ಸ್ವಾರ್ಥವೇ ಕಾರಣ. ಹಿಂದೆ ದುಷ್ಟ ಉದ್ದೇಶಗಳಿಗಾಗಿ ಸಮಸ್ಯೆಗಳ ಸೃಷ್ಟಿಯಾದರೆ ಇಂದು ನನ್ನವರೇ ಏಳಿಗೆಗಾಗಿ ಒಳ್ಳೆ ಉದ್ದೇಶದಿಂದಲೂ ಹೊಸ ಹೊಸ ಸಮಸ್ಯೆಗಳು ಉದ್ಭವ ಆಗುತ್ತಿದೆ. ಹಾಗಾದರೆ ನಮ್ಮಲ್ಲಿ ಸೌಕರ್ಯ ಹೆಚ್ಚುತ್ತಾ ಹೋಗಬೇಕೇ ಅಥವಾ ಹೀಗೆ ಇಷ್ಟೇ ಪ್ರಗತಿಯದ್ದು ಸಾಕೆಂದು ಏಳಿಗೆಯನ್ನೇ ಸ್ಥಗಿತಗೊಳಿಸಬೇಕೆ ?? ನಮ್ಮ ಪ್ರಗತಿಯ ಉದ್ದೇಶ ಪ್ರಕೃತಿ ರಕ್ಷಣೆ ಜೊತೆ ಮಾನವ ಅಭ್ಯುದಯವಾಗಬೇಕು. ಕೆಲವರ ಹಿತವನ್ನು ಸಾರುವ ಕಾಂಕ್ರೀಟ್ ಕಾಡುಗಳ ಅಭಿವೃದ್ಧಿ ಅಲ್ಲ.. ಜೀವಿಗಳ ಈ ಸಂಕೀರ್ಣ ಜಾಲವನ್ನು ಮಾನವ ಹೆಣೆದಿಲ್ಲ, ಆತ ಜಾಲದ ಒಂದು ಎಳೆ ಮಾತ್ರ !!
ಇಂದು ನಾವು ವಿಶ್ವ ಪರಿಸರ ದಿನ ಆಚರಿಸುತ್ತಲೇ ಪೃಥ್ವಿಯ ರತ್ನಗರ್ಭ ವಸುಂಧರೆಯ ಜೀವಂತ ಖಜಾನೆಗೆ ಕನ್ನ ಹಾಕುತ್ತಿದ್ದೇವೆ. ಅತ್ಯುತ್ತಮವಾದದ್ದು ಪುಕ್ಕಟೆಯಾಗಿ ಲಭಿಸಿದಂತೆ ಆಗಿದೆ. ಹಾಗಾಗಿ ಗಾಳಿ ನೀರು ಬೆಳಕುಗಳ ಮಹತ್ವ ತಿಳಿಯದೆ ಕಳಪೆ ವಸ್ತುಗಳಿಗೆ ,ಕ್ಷಣಿಕ ಆನಂದಕ್ಕೆ ದುಬಾರಿ ಬೆಲೆ ತೆರುತ್ತೇವೆ . ವಿಘಟಕ ಜೀವಿಗಳಿಂದಲೂ ವಿಭಜಿಸಲಾಗದ ವಸ್ತುಗಳನ್ನು ಪರಿಸರಕ್ಕೆ ಹಾಕುತ್ತಿದ್ದೇವೆ. ಎಂಡೋ ಸಲ್ಫಾನ್ , ಡಿಡಿಟಿ,ಎಸಿ ,ರೆಫ್ರಿಜರೇಟರ್ ಒಂದೇ ಎರಡೇ ಎಲ್ಲವೂ ಮಾನವ ನಿರ್ಮಿತ ಆಗಿದೆ. ಓಜೋನ್ ಪದರ ಈಗಾಗಲೇ ಹಾನಿಗೊಳಗಾಗಿದ್ದು ನಮ್ಮ ಭವಿಷ್ಯ ಕರಾಳವಾಗುತ್ತಿದೆ. ಪ್ರಪಂಚದ ಇಡೀ ಜೀವರಾಶಿಗೆ ಬೇಕಾದ ಪ್ರಾಣವಾಯುವಿನ ಹದಿನೈದು ಪಟ್ಟನ್ನು ಕಾರ್ಖಾನೆಗಳೆ ನುಂಗುತ್ತಿವೆ. ಬೆಂಗಳೂರಿನಲ್ಲಿ ದಿನವೊಂದಕ್ಕೆ ಕಸವನ್ನು ಎಸೆಯುವ ಬ್ಯಾಟರಿಗಳ ಸಂಖ್ಯೆ 5ಲಕ್ಷ .ಈ ತರಹದ ತ್ಯಾಜ್ಯಗಳನ್ನು ಸಂಸ್ಕರಿಸಿ ನಾಶ ಮಾಡಬೇಕು .ಅಪರೂಪದ ಜೀವಸಂಕುಲಗಳೆಲ್ಲ ನಶಿಸುತ್ತಿರುವುದು ವಿಷಾದನೀಯವಾಗಿದೆ .
ನಮ್ಮದಿಂದು ಬುಲ್ಡೋಜರ್ ಸಂಸ್ಕೃತಿ. ದೂರದ ಕಾಡುಗಳು ನಾಶವಾಗುತ್ತದೆ ಎಂದು ನಾವು ತಣ್ಣೀರು ಸ್ನಾನ ಮಾಡಲಾರೆವು. ರಾಷ್ಟ್ರದ ಹಿತಕ್ಕಾಗಿ ಸಂತಾನ ಹರಣ ಚಿಕಿತ್ಸೆ ಮಾಡಲಾರೆವು. ಆದರೆ ಅಭಿವೃದ್ಧಿಗಾಗಿ ಬಳಸುತ್ತಿರುವ ತಂತ್ರಜ್ಞಾನವನ್ನು ಪರಿಸರ ರಕ್ಷಣೆಗೂ ಬಳಸುವುದು ಪರಿಹಾರವಾಗಿದೆ .ತ್ಯಾಜ್ಯ ವಸ್ತುಗಳ ಪುನರ್ಬಳಕೆ ,ಮಾಲಿನ್ಯ ಹತೋಟಿ ಎಲ್ಲವೂ ವೈಜ್ಞಾನಿಕ ಅರಿವಿನಿಂದ ಸಾಧ್ಯ. ಬರಡು ಬಯಲಿನಲ್ಲಿ ಕೇವಲ ಘೋಷಣಾ ಫಲಕಗಳನ್ನು ಅಪ್ಪಿಕೊಂಡು ನಿಲ್ಲುವ ಸ್ಥಿತಿ ನಮಗೆ ಬಾರದಿರಲಿ .ಸೌರವಲೆ ,ರಬ್ಬರೀಕೃತರಸ್ತೆ ರಿಸೈಕಲಿಂಗ್ ಹಲವಾರು ಪ್ರಯೋಗಗಳು ನಡೆಯಬೇಕಾಗಿದೆ. ನವೀಕರಿಸಬಹುದಾದ ಶಕ್ತಿಯ ಮೂಲಗಳನ್ನು ಹೆಚ್ಚಾಗಿ ಬಳಸಬೇಕಾಗಿದೆ .ಬಂಧುಗಳೇ ಸುಜಾಲಂ ಸುಫಲಾಂ ಎಂದೆಲ್ಲಾ ಹಾಡುವ ನಾವು ಒಟ್ಟಾಗಿ ಪೃಥ್ವಿಯ ಸಂರಕ್ಷಣೆಯ ಗುರಿ ಹೊಂದಿರಬೇಕು. ಹಾಗಾದರೆ ಭೂಮಿ ಸುಂದರ ಸ್ವರ್ಗವಾದೀತು ಅಲ್ಲವೇ? ಚಿಮ್ಮಲಿ ಹಚ್ಚನೆ ಹಸಿರು ನಿರ್ಮಲವಾಗಲಿ ಉಸಿರು ಕೊಚ್ಚಿ ಹೋಗಲಿ ಸ್ವಾರ್ಥ ದುರಾಸೆ ಸ್ವಚ್ಛವಾಗಲಿ ಇಳೆ , ಸ್ವಚ್ಛವಾಗಲಿ ಇಳೆ..
ಶ್ರೀಮತಿ ಸರ್ವಮಂಗಳ.ಕೆ. ಶಿಕ್ಷಕಿ, ವಿಠ್ಠಲ್ ಜೇಸೀಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ವಿಟ್ಲ