ವಿಟ್ಲ: “ಬಾಳ ಹರುಷದ ಕ್ಷಣಗಳು ಹೊಸವರುಷದ ಹೊಸಿಲಲಿ “ಎಂಬಂತೆ ಯುಗಾದಿ ಹಬ್ಬದ ಆಚರಣೆಯನ್ನು ಎರುಂಬು ಶ್ರೀ ದಿವ್ಯಜ್ಯೋತಿ ಮಿತ್ರ ವೃಂದವು ಊರ ಹತ್ತು ಸಮಸ್ತರು ಸೇರಿಕೊಂಡು ಎರುಂಬು ಶ್ರೀ ವಿಷ್ಣುಮಂಗಲ ದೇವಳದಲ್ಲಿ ಸಾಮೂಹಿಕ ನಾಮ ಸಂಕೀರ್ತನೆ ಜೊತೆಗೆ ಕಾರ್ತಿಕ ಪೂಜೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಸೃಷ್ಟಿಯೇ ನೀಡಿದ ಹೂ, ಫಲಾದಿಗಳನ್ನು ಊರ ಸಮಸ್ತರು ತಮ್ಮ ಕೈಯ್ಯಾರೆ ಅರ್ಪಿಸಿ ತನ್ಮಯತೆ ಕಂಡರು.
“ಜೀವೋ ಜೀವಸ್ಯ ಜೀವನಮ್” ಎನ್ನುವ ಹಾಗೆ ಪ್ರತಿಯೊಂದು ಜೀವಿಯು ಜೀವನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಮತ್ತೊಂದು ಜೀವಿಯನ್ನು ಅವಲಂಬಿಸುತ್ತದೆ. ಸಂಘ ಜೀವಿಯಾದ ಮಾನವನಿಗೆ ಸಂಘಟನೆ ಸಾಮಾಜಿಕ, ಸಾಂಘಿಕ ಬದುಕನ್ನು ಕಲಿಸುತ್ತದೆ, ಮನಸ್ಸಿಗೆ ಹದವನ್ನು ಕೊಡುತ್ತದೆ.
ಶ್ರೀ ದಿವ್ಯಜ್ಯೋತಿ ಮಿತ್ರವೃಂದ ಎರುಂಬು ಪರಿಸರದ ಯುವಕರಿಗೆ ಸಂಸ್ಕಾರಯುತ, ಸಾಂಸ್ಕೃತಿಕ, ಕ್ರೀಡಾ, ವ್ಯಸನಮುಕ್ತ ಬದುಕು ಕಲಿಸಿದೆ. ಅಳಿಕೆ ಗ್ರಾಮ ಪಂಚಾಯತ್ ಗೆ ಒಳಪಟ್ಟ ಕಟ್ಟಡದಲ್ಲಿ ತಮ್ಮ ಮೂರು ವರ್ಷದ ಕಾರ್ಯೋನ್ಮುಖಕ್ಕೆ ಕಛೇರಿಯನ್ನು ಊರ, ಸಂಘದ ಹಿರಿಯ ಸದಸ್ಯರ ಜೊತೆ ಅರ್ಚಕರಾದ ಬಾಲಕೃಷ್ಣ ಕಾರಂತರು ಇಂದು ಉದ್ಘಾಟಿಸಿದರು.
ಗೌರವಾಧ್ಯಕ್ಷ ಮೋಹನದಾಸ್ ರೈ, ಹಿರಿಯ ಕಾರ್ಯಕರ್ತ ಕೃಷ್ಣ ಮೂಲ್ಯ, ಅಧ್ಯಕ್ಷರಾದ ರವಿಶಂಕರ್ ಬಲ್ಲಾಳ್, ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು. ತನ್ನ ಸ್ವಂತ ಕಟ್ಟಡ ನಿರ್ಮಾಣದ ಕನಸು ಹೊತ್ತ ಮಿತ್ರವೃಂದದ ಆಶಯವನ್ನು ಇತರರೊಂದಿಗೆ ಹಂಚಿಕೊಳ್ಳಲಾಯಿತು.