ಪುತ್ತೂರು : ಹಲಸಿನ ಹಣ್ಣಿನಲ್ಲಿ ಎಥೆನಾಲ್ ಪಡೆಯಲು ಸಾಧ್ಯ ಎಂದು ಸಂಶೋಧನೆಯ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಇದೀಗ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದ್ದು ಈ ಪ್ರಾಜೆಕ್ಟ್ಅನ್ನು ಖ್ಯಾತ ಇಂಧನ ಕಂಪನಿಯಾದ ಶೆಲ್ ತನ್ನ ಮುಂದಿನ ಸಂಶೋಧನೆಗಾಗಿ ಆಯ್ಕೆ ಮಾಡಿಕೊಂಡಿದೆ.

29 ದೇಶಗಳ ವಿದ್ಯಾರ್ಥಿಗಳ ಭಿನ್ನ ಭಿನ್ನ ಪ್ರಾಜೆಕ್ಟ್ ಗಳಲ್ಲಿ ಆಯ್ಕೆಯಾದ ಆರು ಪ್ರಾಜೆಕ್ಟ್ ಗಳಲ್ಲಿ ಪುತ್ತೂರು ತಾಲೂಕಿನ ವಿದ್ಯಾರ್ಥಿಗಳ ಹಲಸಿನ ಎಥೆನಾಲ್ ಆಯ್ಕೆಯಾಗಿದ್ದು, ಸಂಶೋಧನಾ ಕ್ಷೇತ್ರದಲ್ಲಿ ಭಾರತದ ಹೆಸರನ್ನು ಅಂತಾರಾಷ್ಟ್ರೀಯವಾಗಿ ಗುರುತಿಸಿದೆ. ಯಥೇಚ್ಛವಾಗಿ ಸಿಗುವ ಹಲಸಿನ ಹಣ್ಣಿನಿಂದ ಇತ್ತೀಚಿನ ದಿನಗಳಲ್ಲಿ ಹಲವು ಖಾದ್ಯಗಳು, ಐಸ್ ಕ್ರೀಂ ಗಳು, ಚಾಕಲೇಟ್ ಗಳನ್ನು ತಯಾರಿಸುವುದು ಸಾಮಾನ್ಯ. ಆದರೆ, ಈ ವಿದ್ಯಾರ್ಥಿಗಳು ಇದರಿಂದ ಹೊಸ ಪ್ರಯೋಗ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ಇಲ್ಲಿನ ರಾಮಕೃಷ್ಣ ವಿದ್ಯಾಸಂಸ್ಥೆಯ ಐವರು ವಿದ್ಯಾರ್ಥಿಗಳ ತಂಡ ಸಂಶೋಧಿಸಿದ ಸಂಶೋಧನೆಯೊಂದು ಇದೀಗಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.

ಕರಾವಳಿ ಭಾಗದಲ್ಲಿ ಅತೀ ಹೆಚ್ಚಾಗಿ ಬೆಳೆಯುವ ಹಾಗೂ ಹೆಚ್ಚಾಗಿ ಕೊಳೆತು ಹೋಗುತ್ತಿದ್ದ ಹಲಸಿನ ಹಣ್ಣಿನಿಂದಲೂ ಮೋಟಾರು ವಾಹನಗಳನ್ನು ಓಡಿಸಬಹುದು ಎನ್ನುವುದನ್ನು ಈ ವಿದ್ಯಾರ್ಥಿಗಳು ಕಂಡು ಹಿಡಿದಿದ್ದಾರೆ. ತಾಜಾ ಹಾಗೂ ಕೊಳೆತ ಹಲಸಿನ ಹಣ್ಣಿನ ರಸವನ್ನು ಹೀರಿ ಅದನ್ನು ಸಂಸ್ಕರಿಸಿ ಅದರಿಂದ ಎಥೆನಾಲ್ ಪಡೆಯಬಹುದು ಎನ್ನುತ್ತಾರೆ ವಿದ್ಯಾರ್ಥಿಗಳು.

ವಿದ್ಯಾರ್ಥಿಗಳು ತನ್ನ ಸಂಶೋಧನೆಯನ್ನು ಜಿಲ್ಲಾ ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದ ವೇದಿಕೆಯಲ್ಲೂ ಪ್ರದರ್ಶಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. ಇದೀಗ ಈ ವಿದ್ಯಾರ್ಥಿಗಳ ಈ ಸಂಶೋಧನಾ ವರದಿಯನ್ನು ಖ್ಯಾತ ಇಂಧನ ತಯಾರಿಕಾ ಕಂಪನಿಯಾದ ಶೆಲ್ ಉನ್ನತ ಸಂಶೋಧನೆಗಾಗಿ ಆಯ್ಕೆ ಮಾಡಿಕೊಂಡಿದೆ.

29 ದೇಶಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಸಂಶೋಧನಾ ಪ್ರದರ್ಶನದಲ್ಲಿ ಆಯ್ಕೆಯಾದ 6 ಸಂಶೋಧನಾ ವರಿದಿಯಲ್ಲಿ ಪುತ್ತೂರಿನ ಈ ವಿದ್ಯಾರ್ಥಿಗಳ ಹಲಸಿನ ಬಯೋ ಎಥೆನಾಲ್ ವರದಿಯೂ ಸೇರಿಕೊಂಡಿದೆ. ಶಾಲೆಯಲ್ಲಿ ಈ ಬಗ್ಗೆ ಸಂಶೋಧನೆಯನ್ನು ಆರಂಭಿಸಿದ್ದ ಈ ವಿದ್ಯಾರ್ಥಿಗಳ ತಂಡಕ್ಕೆ ಅಧ್ಯಾಪಕರಿಂದ ಹಾಗೂ ಶಾಲೆಯ ಆಡಳಿತ ಮಂಡಳಿಯಿಂದಲೂ ಹೆಚ್ಚಿನ ಪ್ರೋತ್ಸಾಹ ದೊರೆತಿದೆ.
