ಮಂಜೇಶ್ವರ: ಕುಂಬಳೆ ಸೀಮೆಯ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದ ಕುಂಬಳೆ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಅಭೂತಪೂರ್ವ ಬ್ರಹ್ಮಕಲಶದ ಬಳಿಕ ಇದೀಗ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಉತ್ಸವದ ಅಂಗವಾಗಿ ಇಂದು ರಾತ್ರಿ “ಐತಿಹಾಸಿಕ ಕುಂಬಳೆ ಬೆಡಿ ಮಹೋತ್ಸವ” ನಡೆಯಲಿದೆ.
ಬೆಡಿ ಮಹೋತ್ಸವಕ್ಕೆ ಈ ಬಾರಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕಂಚೆರಿ ಅಲತೊಡ್ ನಿಂದ ಸಿಡಿಮದ್ದು ತರಿಸಲು ನಿರ್ಧರಿಸಿದ್ದು, ಲಕ್ಷಾಂತರ ರೂಪಾಯಿ ಮೊತ್ತದ ಸಿಡಿಮದ್ದು ಉತ್ಪನ್ನಗಳನ್ನು ಪಾಲಕ್ಕಾಡ್ ಪೊಲೀಸರು ಪತ್ತೆ ಹಚ್ಚಿ ತಮ್ಮ ವಶಕ್ಕೆ ಪಡಕೊಂಡ ಘಟನೆ ನಡೆದಿದೆ.
ಕಳೆದ ಬಾರಿ ಪುತ್ತೂರಿನಿಂದ ಬೆಡಿ ತಂದಿದ್ದು,ಈ ಬಾರಿ ಪಾಲಕ್ಕಾಡ್ ನಿಂದ ಬೆಡಿ ತರಿಸಲು ಬೆಡಿ ಉತ್ಸವ ಸಮಿತಿ ನಿರ್ಧರಿಸಿತ್ತು. ಈ ಬಗ್ಗೆ ಅಲ್ಲಿನ ಬೆಡಿ ಗುತ್ತಿಗೆದಾರರಾರಿಗೆ ಸಮಿತಿಯು ನಿನ್ನೆ ತಲುಪಿಸಬೇಕೆಂದು ಮುಂಚಿತವಾಗಿ ಮಾಹಿತಿಯನ್ನು ಕೂಡಾ ನೀಡಿದ್ದರು. ಆದರೆ ನಿನ್ನೆ ಕುಂಬಳೆಗೆ ತಲುಪುವ ಮುನ್ನವೇ ತಯಾರಿಸಿ, ಮಾಡಿಟ್ಟಿದ್ದ ಸಿಡಿಮದ್ದು ಉತ್ಪನ್ನ ಮತ್ತು ಪಟಾಕಿಗಳು ಇತರ ಉತ್ಪನ್ನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಗುತ್ತಿಗೆದಾರರು ಉತ್ಸವ ಕಮಿಟಿ ಪದಾಧಿಕಾರಿಗಳಿಗೆ ಇಂದು ತಿಳಿಸಿದ್ದಾರೆ.
ಪಾಲಕ್ಕಾಡ್ ಜಿಲ್ಲೆಯ ವಡಕ್ಕಂಚೆರಿ ಅಲತೊಡ್ ಎಂಬಲ್ಲಿ ಗದ್ದೆಯ ಹೊಳೆ ಬದಿಗೆ ಸೇರಿದ ರಬ್ಬರ್ ತೋಟದ ಶೆಡ್ ನಲ್ಲಿ ಈ ಸಿಡಿಮದ್ದುಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದು ಆಗಮಿಸಿದ ಪೊಲೀಸರನ್ನು ಕಂಡು ಕಾರ್ಮಿಕರು ಓಡಿ ಪರಾರಿಯಾಗಿದ್ದಾರೆ. ವರ್ಗೀಸ್ ಅವರ ಹೆಸರಲ್ಲಿ ಐದು ಕಿ.ಗ್ರಾಂ ಬೆಡಿ ಮದ್ದು ಕೈ ವಶ ಇಡುವ ಲೈಸನ್ಸ್ ಮಾತ್ರ ಇರುವುದೆಂದು ಆಳತೂರ್ ಡಿ.ವೈ.ಎಸ್.ಪಿ ಆರ್ ಸಂತೋಷ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಇದೀಗ ಸಿಡಿಮದ್ದು ಸಂಗ್ರಹಿಸಿಟ್ಟ ಸ್ಥಳದಲ್ಲಿ ಪೊಲೀಸ್ ಕಾವಲು ಏರ್ಪಡಿಸಲಾಗಿದ್ದು, ಬೆಡಿ ಮತ್ತು ಇತರ ಸ್ಪೋಟಕ ವಸ್ತುಗಳನ್ನು ಇನ್ನು ನಾಶಪಡಿಸುವುದಾಗಿ ಪೊಲೀಸರು ತಿಳಿಸಿದಾರೆ. ಪಾರಂಪರಿಕವಾಗಿ ನಡೆಯುವ ಕುಂಬಳೆ ಬೆಡಿ ಇಡೀ ದೇಶ ವಿದೇಶದಲ್ಲಿ ಕೂಡಾ ಖ್ಯಾತಿಯನ್ನು ಪಡೆದಿದ್ದು, ಈ ಬಾರಿ ಬ್ರಹ್ಮ ಕಲಶದ ಬಳಿಕ ಉತ್ಸವಕ್ಕೆ ಹೆಚ್ಚಿನ ಕಲೆ ಕಂಡು ಬಂದಿತ್ತು. ಇದೀಗ ಉತ್ಸವಕ್ಕೆ ದಿನಂಪ್ರತಿ ಸಾವಿರಾರು ಅಧಿಕ ಭಕ್ತರು ಆಗಮಿಸಿ ದೇವರ ದರ್ಶನಗೈದು, ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂದು ನಡೆಯುವ ಬೆಡಿ ಮಹೋತ್ಸವ ವೀಕ್ಷಿಸಲು ಈಗಾಗಲೇ ಜಿಲ್ಲೆಯಲ್ಲದೇ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಲು ಉತ್ಸುಕರಾಗಿದ್ದರು. ಇದೀಗ ಬೆಡಿ ಮಹೋತ್ಸವ ಸಮಿತಿ ದೇವರ ಪಾರಂಪರಿಕ ಸೇವೆಗಾಗಿ ಸಾಂಕೇತಿಕವಾಗಿ ಬೆಡಿ ಸಿಡಿಸಲು ನಿರ್ಧರಿಸಿದ್ದಾರೆ.