


ವಿಟ್ಲ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹನ್ನೊಂದು ಸಿಬ್ಬಂದಿಗಳು ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡಿದ್ದು, ಈ ಹಿನ್ನಲೆ ವಿಟ್ಲ ಪೊಲೀಸ್ ಠಾಣೆ, ದಕ್ಷಿಣ ಕನ್ನಡ ಜಿಲ್ಲೆ ವಿಟ್ಲ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಯವರಿಂದ ಬೀಳ್ಕೊಡುಗೆ ಸಮಾರಂಭ ಜೆಎಲ್ ಸಭಾಂಗಣದಲ್ಲಿ ನಡೆಯಿತು.

ವಿಟ್ಲ ಠಾಣಾ ಇನ್ಸ್ಪೆಕ್ಟರ್ ನಾಗರಾಜ್ ಹೆಚ್ ಇ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ವಿಟ್ಲ ಠಾಣೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಇದೀಗ ಹಲವು ಠಾಣೆಗಳಿಗೆ ವರ್ಗಾವಣೆಗೊಂಡಿರುವ ಎಎಸ್ಐ ರವೀಶ್ , ಹೆಡ್ಕಾನ್ಸ್ಟೇಬಲ್ ಪ್ರಸನ್ನ ಕುಮಾರ್, ಹೆಡ್ಕಾನ್ಸ್ಟೇಬಲ್ ಡ್ಯಾನಿ ಪ್ರಾಂಸಿಸ್ ತ್ರಾವೋ, ಪೊಲೀಸ್ ಕಾನ್ಸ್ಟೇಬಲ್ಗಳಾದ ಶ್ರೀಮತಿ ಅರ್ಪಿತಾ, ಅಶೋಕ್, ಹೇಮರಾಜ್, ವಿಶ್ವನಾಥ್, ವಿನೋದ್ ಕುಮಾರ್, ಮಂಜುನಾಥ್, ಮತ್ತು ವಿಠಲ, ಶ್ರೀಮತಿ ಹೇಮಾ, ಹಾಗೂ ಪೊಲೀಸ್ ಸೇವೆಯಿಂದ ನಿವೃತ್ತಿಗೊಂಡಿರುವ ವೆಂಕಟರಮಣ ಗೌಡ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೊಲೀಸ್ ಉಪನಿರೀಕ್ಷಕರು ರತನ್ ಕುಮಾರ್ ಉಪಸ್ಥಿತರಿದ್ದು, ವರ್ಗಾವಣೆಗೊಂಡ ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ವರ್ಗಾವಣೆಗೊಳ್ಳುತ್ತಿರುವ ಎಲ್ಲಾ ಸಿಬ್ಬಂದಿಗಳು ವಿಟ್ಲ ಠಾಣೆಯಲ್ಲಿ ಸೇವೆ ಸಲ್ಲಿಸಿದ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ವತಿಯಿಂದ ವರ್ಗಾವಣೆಗೊಳ್ಳುತ್ತಿರುವ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳು ಸೇರಿದಂತೆ ಹಿತೈಷಿಗಳು ಉಪಸ್ಥಿತರಿದ್ದರು.
