

ಉತ್ತರ ಪ್ರದೇಶದ ಅಯೋಧ್ಯೆ ದೇಗುಲದ ಸಂಕೀರ್ಣದಲ್ಲಿ ಗುಂಡಿನ ದಾಳಿ ನಡೆದಿದ್ದು, ದಾಳಿಗೆ ಎಸ್ಎಸ್ಎಫ್ ಯೋಧ ಬಲಿಯಾಗಿದ್ದಾರೆ. ಗುಂಡಿನ ದಾಳಿಗೆ ಬಲಿಯಾದ ಯೋಧನನ್ನು ಅಂಬೇಡ್ಕರ್ ನಗರದ ನಿವಾಸಿ ಶತ್ರುಘ್ನ ವಿಶ್ವಕರ್ಮ(೨೫) ಎಂದು ಗುರುತಿಸಲಾಗಿದೆ.
ಬುಧವಾರ ಬೆಳಗ್ಗೆ 5.25ಕ್ಕೆ ಈ ಘಟನೆ ನಡೆದಿದ್ದು, ಆವರಣದಲ್ಲಿ ಗುಂಡಿನ ಸದ್ದು ಕೇಳಿದ ಬಳಿಕ ಸಹ ಸಿಬ್ಬಂದಿಗಳು ಓಡಿ ಬಂದಿದ್ದಾರೆ. ಅಷ್ಟರಲ್ಲಾಗಲೆ ಯೋಧ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.
ಯೋಧನ ಸಾವು ಅಯೋಧ್ಯೆ ದೇಗುಲ ಸಂಕೀರ್ಣದಲ್ಲಿ ಸಂಚಲನ ಮೂಡಿಸಿದೆ. ಘಟನಾ ಸ್ಥಳಕ್ಕೆ ಐಜಿ ಮತ್ತು ಎಸ್ಪಿ ಆಗಮಿಸಿ ಪರಿಶೀಲನೆ ನಡೆಸಿದರು. ಫೋರೆನ್ಸಿಕ್ ತಂಡ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು. ಪ್ರಾಥಮಿಕ ತನಿಖೆಯಲ್ಲಿ ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ.ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ.
ಘಟನೆಗೂ ಮುನ್ನ ಯೋಧ ಮೊಬೈಲ್ ನೋಡುತ್ತಿದ್ದ ಎಂದು ಮೃತ ಯೋಧನ ಸಹೋದ್ಯೋಗಿಗಳು ತಿಳಿಸಿದ್ದಾರೆ. ಅವರು ಕೆಲವು ದಿನಗಳಿಂದ ಯಾವುದೋ ಚಿಂತೆಯಲ್ಲಿದ್ದರು ಎಂಬುದಾಗಿ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ.