ಧ್ವಜಾರೋಹಣ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ




ಅಯೋಧ್ಯೆ ರಾಮ ಮಂದಿರದಲ್ಲಿ ಇಂದು ಧರ್ಮಧ್ವಜಾರೋಹಣ ಸಮಾರಂಭ ನಡೆಯಿತು.
ಪ್ರಧಾನಿ ನರೇಂದ್ರ ಮೋದಿ ‘ಅಭಿಜಿತ್ ಮುಹೂರ್ತ’ದಲ್ಲಿ ಧ್ವಜಾರೋಹಣ ನೆರವೇರಿಸಿ ಭಕ್ತರಿಗೆ ದೇವಾಲಯಕ್ಕೆ ಮುಕ್ತ ಪ್ರವೇಶದ ಸಂಕೇತ ನೀಡಿದರು. ಈ ಸಮಾರಂಭವು ತ್ರೇತಾಯುಗದಲ್ಲಿ ಶ್ರೀರಾಮ ಮತ್ತು ಸೀತೆಯ ದೈವಿಕ ವಿವಾಹ ನಡೆದ ‘ವಿವಾಹ ಪಂಚಮಿ’ಯಂದು ಸಂಯೋಜಿತವಾಗಿದ್ದು, ಅಯೋಧ್ಯೆ ಪೂರ್ಣ ವೈಭವದಿಂದ ಅಲಂಕಾರಗೊಂಡು ವೈಧಿಕವಾಗಿ ಹೊಳೆಯುತ್ತಿತ್ತು.
ಧ್ವಜವು ಕೋವಿದಾರ ಮರ ಮತ್ತು ‘ಓಂ’ ಚಿಹ್ನೆಯನ್ನು ಹೊಂದಿದೆ. ಕೋವಿದಾರ ಮರವು ಪಾರಿಜಾತ ಮತ್ತು ಮಂದಾರ ಮರದಂತೆ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿತವಾಗಿದ್ದು, ಶತಮಾನಗಳಿಂದ ಸೂರ್ಯವಂಶ, ರಾಜವಂಶದ ರಾಜರ ಧ್ವಜಗಳಲ್ಲಿ ಕಾಣಿಸುತ್ತಿದ್ದುದು ಗಮನಾರ್ಹ. ವಾಲ್ಮೀಕಿ ರಾಮಾಯಣದಲ್ಲಿ ಭರತನು ರಾಮನನ್ನು ಭೇಟಿಯಾಗಿ ಕಾಡಿಗೆ ಹೋದ ಸಂದರ್ಭದಲ್ಲಿ ತನ್ನ ಧ್ವಜದ ಮೇಲೆ ಕೋವಿದಾರ ಮರದ ಚಿತ್ರವಿತ್ತು. ಧ್ವಜದಲ್ಲಿ ‘ಓಂ’ ಚಿಹ್ನೆಯನ್ನು ಚಿತ್ರಿಸಲಾಗಿದೆ, ಇದು ಎಲ್ಲಾ ಮಂತ್ರಗಳ ಆತ್ಮವಾಗಿದ್ದು, ಇಡೀ ವಿಶ್ವವನ್ನು ಪ್ರತಿನಿಧಿಸುತ್ತದೆ. ಧ್ವಜವು ವಿಜಯದ ಸಂಕೇತವಿರುವ ಸೂರ್ಯ ದೇವರ ಚಿಹ್ನೆಯನ್ನು ಸಹ ಒಳಗೊಂಡಿದೆ.
ಧ್ವಜಾರೋಹಣ ಸಮಾರಂಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಭಾರತದ ವಿವಿಧೆಡೆಗಳಿಂದ ಸುಮಾರು ಆರು ಸಾವಿರ ಗಣ್ಯರು ಪಾಲ್ಗೊಂಡರು. ಸೋಮವಾರದಿಂದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿದ್ದು, ಮಂಗಳವಾರ ಬೆಳಗ್ಗೆ 11:58 ರಿಂದ ಮಧ್ಯಾಹ್ನ 1 ಗಂಟೆಯ ನಡುವಿನ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಿತು.







