



ಉಡುಪಿ : ಖಾಸಗಿ ಫೈನಾನ್ಸ್ ಗೆ ಸಿಬ್ಬಂದಿಗಳಿಂದಲೇ ವಂಚನೆ ನಡೆದಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.
ಈ ಕುರಿತು ಖಾಸಗಿ ಫೈನಾನ್ಸ್ ಗೆ ಲಿಮಿಟೆಡ್, ಉಡುಪಿ ಶಾಖೆಯ ಏರಿಯಾ ಮ್ಯಾನೇಜರ್ ಬಸವರಾಜ್ ಎಂಬುವವರು ದೂರು ದಾಖಲಿಸಿದ್ದಾರೆ.
ಬ್ಯಾಂಕ್ನಲ್ಲಿ ಒಂದು ವರ್ಷದಿಂದ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಬ್ದುಲ್ ಲತೀಫ್ ಖಾಸಿಂ ಮುಲ್ಲಾರವರು ಸಂಘದ ಸದಸ್ಯರಿಂದ ಕಂತಿನ ಪ್ರಕಾರ ಸಾಲದ ಹಣವನ್ನು ವಸೂಲಿ ಮಾಡುವ ಕರ್ತವ್ಯವನ್ನು ಮಾಡಿಕೊಂಡಿರುತ್ತಾರೆ. ಅಬ್ದುಲ್ ಲತೀಫ್ ಖಾಸಿಂ ಮುಲ್ಲಾರವರು ಸಂಘದ ಸದಸ್ಯರು ಕಟ್ಟಿದ ಲೋನ್ ಹಣದಲ್ಲಿ ರೂಪಾಯಿ 1,25,787 ಹಣವನ್ನು ಸಂಸ್ಥೆಗೆ ಪಾವತಿಸದೇ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದು, ಹಾಗೂ ಲೋನ್ ಆಫೀಸರ್ಗಳಾದ ಅಕ್ಷಯ್ 49,000 ರೂ. ಮತ್ತು ದೀಕ್ಷಿತ್ 3,00,000 ರೂ. ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು, ಸಂಸ್ಥೆಯ ಮ್ಯಾನೇಜರ್ರವರೊಂದಿಗೆ ಸೇರಿಕೊಂಡು ಈ ಮೂವರೂ ಒಟ್ಟು ರೂ. 4,74,787/- ಹಣವನ್ನು ಸಂಸ್ಥೆಗೆ ಕಟ್ಟದೇ ಮೋಸ ಹಾಗೂ ನಂಬಿಕೆ ದ್ರೋಹ ಮಾಡಿರುವ ಕುರಿತು ದೂರು ದಾಖಲಿಸಲಾಗಿದೆ.
ಆ.29 ರಂದು ಸಂಸ್ಥೆಯ ಹಿರಿಯ ಅಧಿಕಾರಿಗಳು ಲೆಕ್ಕ ಪತ್ರಗಳನ್ನು ಪರಿಶೀಲನೆ ಮಾಡಿದಾಗ ಸಂಸ್ಥೆಯ ನಗದು ಕ್ಲೋಸಿಂಗ್ ಬ್ಯಾಲೆನ್ಸ್ ಕಡಿಮೆ ಇದ್ದ ಕಾರಣ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ








