


ಉಳ್ಳಾಲ: ಇಬ್ಬರು ಅಪ್ರಾಪ್ತರು ಹಾಗೂ ಮೂವರು ವಯಸ್ಕರು ಸೇರಿದಂತೆ ಉಳ್ಳಾಲದಲ್ಲಿ ಚಿನ್ನಾಭರಣ ಕಳವು ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಶ್ರೇಯಸ್ಸ್ ಬೆಳ್ತಂಗಡಿ, ಉರ್ವದ ಪೃಥ್ವಿರಾಜ್ ಮತ್ತು ತೌಸೀಫ್ ಬೆಳ್ತಂಗಡಿ ಮತ್ತು ಇಬ್ಬರು ಅಪ್ರಾಪ್ತರು ಎಂದು ಗುರುತಿಸಲಾಗಿದೆ. ಕಳವು ಮಾಡಿದ ಚಿನ್ನಾಭರಣವನ್ನು ಅಂಗಡಿಗಳಿಗೆ ಮಾರಾಟ ಮಾಡಿರುವು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಜೂನ್ 28 ರಂದು ಉಳ್ಳಾಲ ಧರ್ಮನಗರದ ನಿವಾಸಿ ಶ್ರೀಧರ್ (65) ಎಂಬುವರು ತಮ್ಮ ಬೆಡ್ರೂಮ್ ಕಬೋರ್ಡ್ನಿಂದ ಸುಮಾರು 15 ಲಕ್ಷ ಮೌಲ್ಯದ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜೂನ್ 8 ರಂದು ಬೆಳಿಗ್ಗೆ 8 ಗಂಟೆ ಸಮಯ ಹಾಹೂ ಜೂನ್ 16 ರಂದು ಮಧ್ಯಾಹ್ನ 12 ಗಂಟೆ ವೇಳೆ ಕಳ್ಳತನ ನಡೆದಿದ್ದು, ಅವರ ದೂರಿನ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಅವರ ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ, ಪೊಲೀಸ್ ಉಪ ಕಮಿಷನರ್ (ಅಪರಾಧ ಮತ್ತು ಸಂಚಾರ) ಸಿದ್ಧಾರ್ಥ್ ಗೋಯಲ್, ಪೊಲೀಸ್ ಉಪ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಬಿ ಪಿ ದಿನೇಶ್ ಕುಮಾರ್, ಮತ್ತು ಸಹಾಯಕ ಪೊಲೀಸ್ ಕಮಿಷನರ್ (ದಕ್ಷಿಣ) ಧನ್ಯಾ ನಾಯಕ್, ಉಳ್ಳಾಲ ಪೊಲೀಸ್ ಇನ್ಸ್ಪೆಕ್ಟರ್ ಬಾಲಕೃಷ್ಣ ಮತ್ತು ಅವರ ತಂಡ ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.