ಬೆತ್ತಲೆಯಾಗಿ ರಸ್ತೆಯಲ್ಲೆಲ್ಲಾ ಓಡಾಡ್ತಾ ಇದ್ದ.. ಈತನನ್ನು ಕಂಡ ಜನರೆಲ್ಲರೂ ಈತನ ವರ್ತನೆಗೆ ಭಯಭೀತರಾಗಿ ಓಡಿ ಹೋಗ್ತಾ ಇದ್ರು. ಮೈಮೇಲಿದ್ದ ಬಟ್ಟೆಯನ್ನು ಕೈನಲ್ಲಿ ಹಿಡಿದುಕೊಂಡು ವಿವಸ್ತ್ರನಾಗಿ ಗೂನಡ್ಕ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಟ ನಡೆಸುತ್ತಿದ್ದ ಈ ಮಾನಸಿಕ ಅಸ್ವಸ್ಥ ಯಾರನ್ನೂ ಮುಟ್ಟೋಕು ಬಿಡ್ತಾ ಇರ್ಲಿಲ್ಲ, ಯಾರ ಮಾತೂ ಕೇಳ್ತಾ ಇರ್ಲಿಲ್ಲ. ಸಾರ್ವಜನಿಕರು ಬಟ್ಟೆ ಧರಿಸುವಂತೆ ಅದೆಷ್ಟೋ ಬಾರಿ ತಿಳಿಸಿದರು ಯಾರನ್ನೂ ಕೇರ್ ಮಾಡದ ಈತನನ್ನು ಕಂಟ್ರೋಲ್ ಮಾಡಿದವರು ಯಾರು ಅಂತೀರಾ.. ಅವರೇ ನಮ್ಮ ಪೊಲೀಸರು..
ಸುಳ್ಯ ತಾಲೂಕಿನ ಸಂಪಾಜೆ ಸಮೀಪದ ಗೂನಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ವ್ಯಕ್ತಿಯೋರ್ವ ತನ್ನ ಮೈಯಲ್ಲಿದ್ದ ಬಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು, ವಿವಸ್ತ್ರನಾಗಿ ಓಡಾಟ ನಡೆಸುತ್ತಿದ್ದ. ಈತನ ಈ ವರ್ತನೆಯನ್ನು ಕಂಡ ಸಾರ್ವಜನಿಕರು ಭಯಭೀತರಾಗಿದ್ದು, ಸ್ಥಳೀಯರು ಆತನನ್ನು ಹಿಡಿದು ಬಟ್ಟೆ ಧರಿಸುವಂತೆ ತಿಳಿಸಿದ್ದಾರೆ. ಆದರೆ ಯಾರ ಮಾತನ್ನು ಕೇಳದ ಈ ವ್ಯಕ್ತಿ ಮುಂದಕ್ಕೆ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಸಾರ್ವಜನಿಕರು ಕಲ್ಲುಗುಂಡಿ ಹೊರಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ತಡೆದು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಈ ವ್ಯಕ್ತಿ ಮಾನಸಿಕ ಅಸ್ವಸ್ಥನೆಂದು ತಿಳಿದು ಬಂದಿದ್ದು, ಕೂಡಲೇ ಕಲ್ಲುಗುಂಡಿ ಹೊರಠಾಣಾ ಪೊಲೀಸರು ಈತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಬಿಪಿ ತಪಾಸಣೆ ನಡೆಸಿದ್ದಾರೆ. ಬಳಿಕ ಪೊಲೀಸರೇ ಊಟ ಕೊಡಿಸಿ, ಸ್ವಲ್ಪ ಕೈಯಲ್ಲಿ ಹಣ ಕೊಟ್ಟು ಉಪಚರಿಸಿ, ನೀನು ಯಾವಕಡೆಗೆ ಹೋಗಬೇಕೆಂದು ಕೇಳಿದಾಗ ಮಡಿಕೇರಿ ಕಡೆಗೆ ಕೈ ತೋರಿಸಿರುತ್ತಾನೆ. ಈ ಮಧ್ಯೆ ಮಡಿಕೇರಿ ಕಡೆಗೆ ತೆರಳುವ ಲಾರಿಯೊಂದು ಬಂದಿದ್ದು, ಆ ಲಾರಿಯ ಮೂಲಕ ಮಡಿಕೇರಿ ಕಡೆ ಹತ್ತಿಸಿ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.