ಸರಕಾರಿ ಪ್ರೌಢಶಾಲೆ ಮಾಣಿಲ, “ಪರಿಸರ ಕ್ಲಬ್” ವತಿಯಿಂದ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗಾಗಿ ಕ್ಷೇತ್ರ ಭೇಟಿ ಎಂಬ ಶೀರ್ಷಿಕೆಯಡಿ ಕೃಷಿ, ಕೃಷಿಯಲ್ಲಿ ಬಳಸುವ ಪದ್ದತಿಗಳು, ಸಲಕರಣೆಗಳು ಅದರಲ್ಲೂ ಭತ್ತದ ಕೃಷಿಯ ಪ್ರಾತ್ಯಕ್ಷಿಕೆ ನೋಡಲು ಜೊತೆಗೆ ಸ್ವ ಅನುಭವ ಪಡೆಯಲು ಮಾಣಿಲ ಗ್ರಾಮ ಪಂಚಾಯತ್ ಸದಸ್ಯರಾದ ವಿಷ್ಣು ಕೊಮ್ಮುಂಜೆ ಇವರ ಕೃಷಿಭೂಮಿಗೆ ಸರಕಾರಿ ಪ್ರೌಢಶಾಲೆ ಮಾಣಿಲದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪರಿಸರದ ಮಡಿಲಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭಾ ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲೆ ಮಾಣಿಲದ ಮುಖ್ಯೋಪಾಧ್ಯಯರಾದ ಸುಬ್ರಹ್ಮಣ್ಯ ಭಟ್, ಮಾಣಿಲ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಧರ್ ಬಾಳೆಕಲ್ಲು, ವಿಷ್ಣು ಕೊಮ್ಮುಂಜೆ ಇವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಶಿವಪ್ರಸಾದ್ ಸೊರಂಪಳ್ಳ, ಎಸ್ಡಿಎಮ್ಸಿ ಅಧ್ಯಕ್ಷರು ಸರಕಾರಿ ಪ್ರೌಢಶಾಲೆ ಮಾಣಿಲ, ಮಾಣಿಲ ಗ್ರಾಮ ಪಂಚಾಯತ್ ಸದಸ್ಯರುಗಳಾದ ಮಾಲತಿ, ಶೋಭಾ, ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಲವು ವರ್ಷಗಳಿಂದ ಕೃಷಿಯಲ್ಲೇ ತಮ್ಮ ಜೀವನವನ್ನು ನಡೆಸಿ ನೇಜಿ ನೆಡುವ ಕಾರ್ಯದಲ್ಲಿ ಪರಿಣಿತರಾದ ಕೊಮ್ಮುಂಜೆ ಪರಿಸರದ ಹಿರಿಯ ಪರಿಶ್ರಮಿ ವ್ಯಕ್ತಿಗಳಾದ ಕಮಲ, ಗಿರಿಜಾ ಹಾಗೂ ವಿಶೇಷ ಚೇತನ ವ್ಯಕ್ತಿ ಪರಮೇಶ್ವರಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಬಳಿಕ ಗದ್ದೆಯಲ್ಲಿ ಪ್ರೌಢಶಾಲಾ ಮಕ್ಕಳಿಗೆ ನೇಜಿ ನೆಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಊರಿನ ಹಿರಿಯ ಮಹಿಳೆಯರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಕ್ಕಳಿಗೆ ನೇಜಿ ನೆಡುವ ಕಾರ್ಯಗಾರ, ಹಾಗೂ ಟಿಲ್ಲರ್ನಿಂದ ಗದ್ದೆ ಉಳುವ ಬಗ್ಗೆ ಹೇಳಿಕೊಡಲಾಯಿತು. ಶಾಲಾ ಮಕ್ಕಳು ಸೇರಿದಂತೆ ಶಾಲಾ ಶಿಕ್ಷಕರು ಬಹಳ ಉತ್ಸಾಹದಿಂದ ಈ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡರು.
ಬಳಿಕ ಕೆಸರು ಗದ್ದೆಯಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಮಕ್ಕಳೆಲ್ಲರೂ ಕೆಸರಲ್ಲಿ ಮಿಂದೆದ್ದು ಸಂಭ್ರಮಿಸಿದರು. ಬಳಿಕ ವಿಷ್ಣು ಕೊಮ್ಮುಂಜೆಯವರ ಮನೆಯಲ್ಲಿ ಸವಿಯಾದ ಬಿಸಿ ಬಿಸಿ ಭೋಜನವನ್ನುಂಡು ತಮ್ಮ ಮನೆಗಳತ್ತ ತೆರಳಿದರು.
ಭಾರತ ಕೃಷಿ ಪ್ರಧಾನ ದೇಶವಾಗಿದ್ದರೂ, ಇಂದು ಕೃಷಿ ಅಳಿವಿನತ್ತ ಸಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಜೀವನಕ್ಕಾಗಿ ಪಟ್ಟಣವನ್ನು ಅವಲಂಬಿಸಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಆದ ಕಾರಣ ಇಂದಿನ ಮಕ್ಕಳಿಗೆ ಭತ್ತ ಕೃಷಿ ಸೇರಿದಂತೆ ಒಟ್ಟಾಗಿ ಕೃಷಿ ಪ್ರಧಾನ ವ್ಯವಸ್ಥೆ, ಕೃಷಿ ಭೂಮಿಯ ಬಗ್ಗೆ ಪರಿಜ್ಞಾನ ಇಲ್ಲದಿರುವುದು ಕೃಷಿಯ ಅಳಿವಿಗೆ ಕಾರಣವಾಗಿದೆ ಆದುದರಿಂದ ಮಕ್ಕಳಿಗೆ ಕೃಷಿಯ ಬಗ್ಗೆ ಪ್ರತೀ ಶಾಲಾ ಮಟ್ಟದಲ್ಲಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸುವುದು ಉತ್ತಮ. ಮಾಣಿಲ ಗ್ರಾಮದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳ ಹೆತ್ತವರು ಸೇರಿದಂತೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.