Friday, June 26, 2026
spot_imgspot_img
spot_imgspot_img

ಗುಂಡೇಟು, ಸುಟ್ಟ ಗಾಯಗಳೊಂದಿಗೆ ಕಾರಿನೊಳಗೆ ದಂಪತಿ ಮೃತದೇಹ ಪತ್ತೆ..!

- Advertisement -
- Advertisement -

ನವದೆಹಲಿ: ಮಧ್ಯಪ್ರದೇಶದ ಅಶೋಕನಗರದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಗುಂಡೇಟು ಹಾಗೂ ಸುಟ್ಟ ಗಾಯಗಳೊಂದಿಗೆ ದಂಪತಿಯ ಮೃತದೇಹಗಳು ಪತ್ತೆಯಾಗಿದ್ದು, ಪ್ರಕರಣವನ್ನು ಕೊಲೆ ಹಾಗೂ ಆತ್ಮಹತ್ಯೆ ಎರಡೂ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತರನ್ನು ರಿತಿಕ್ ಸೋನಿ ಮತ್ತು ಮುಸ್ಕಾನ್ ಎಂದು ಗುರುತಿಸಲಾಗಿದೆ. ರಿತಿಕ್ ಕಾರಿನ ಚಾಲಕನ ಆಸನದಲ್ಲಿ ಕುಳಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಲೆಗೆ ಗುಂಡೇಟಿನ ಗಾಯ ಮತ್ತು ಮುಖದ ಮೇಲೆ ಸುಟ್ಟ ಗುರುತುಗಳಿದ್ದವು. ಮುಸ್ಕಾನ್ ಪಕ್ಕದ ಆಸನದಲ್ಲಿ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ. ಇಬ್ಬರೂ ಅಶೋಕನಗರದ ನಿವಾಸಿಗಳಾಗಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಮುಸ್ಕಾನ್ ಬುಧವಾರ ಮಧ್ಯಾಹ್ನ ಜಿಮ್‌ಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದಳು. ಆದರೆ ರಾತ್ರಿ ಮನೆಗೆ ವಾಪಸ್ ಬಾರದೆ ಇದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಿದ್ದರು. ಸಂಪರ್ಕ ಸಾಧ್ಯವಾಗದ ಕಾರಣ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು.

ಇತ್ತ, ರಿತಿಕ್ ಕುಟುಂಬದವರು ಸುಮಾರು 15 ದಿನಗಳ ಹಿಂದೆ ಇಂದೋರ್‌ನಿಂದ ಅಶೋಕನಗರಕ್ಕೆ ಮರಳಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. “ಬೆಳಿಗ್ಗೆ ಸ್ಥಳಕ್ಕೆ ತಲುಪಿದಾಗ ನನ್ನ ಮಗನ ಶವ ಕಾರಿನೊಳಗೆ ಇತ್ತು. ಪ್ರಕರಣದ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು” ಎಂದು ರಿತಿಕ್ ತಂದೆ ರಾಕೇಶ್ ಸೋನಿ ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರನ್ನು ಕರೆಸಿ ಸಾಕ್ಷ್ಯ ಸಂಗ್ರಹಿಸಿ, ಕಾರಿನೊಳಗಿನಿಂದ ಒಂದು ಪಿಸ್ತೂಲ್, ರಕ್ತಸಿಕ್ತ ಕೊಡಲಿ ಹಾಗೂ ಕಟ್ಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಕಾರಿನಿಂದ ಸುಮಾರು 50 ಅಡಿ ದೂರದಲ್ಲಿ ಮೂರು ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.

ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯುವ ಸಾಧ್ಯತೆ ಇದೆ. ಪ್ರಾಥಮಿಕ ತನಿಖೆಯಲ್ಲಿ ರಿತಿಕ್ ಮತ್ತು ಮುಸ್ಕಾನ್ ಈ ಹಿಂದೆ ಇಂದೋರ್‌ನ ಖಾಸಗಿ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!